ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ

ವಿಜೇತೆಗೆ ಶೇ 64ರಷ್ಟು ಮತ: ಯಶವಂತ ಸಿನ್ಹಾ ಪರಾಭವ
Last Updated 21 ಜುಲೈ 2022, 18:42 IST
ಅಕ್ಷರ ಗಾತ್ರ

ನವದೆಹಲಿ:ದೇಶದ 15ನೇ ರಾಷ್ಟ್ರಪತಿಯಾಗಿಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಆಯ್ಕೆಯಾಗಿದ್ದಾರೆ. ಮುರ್ಮು ಅವರು ಶೇ 64ರಷ್ಟು ಮತಗಳನ್ನು ಪಡೆದಿದ್ದಾರೆ. ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಯಶವಂತ ಸಿನ್ಹಾ ನಿರಾಸೆ ಅನುಭವಿಸಿದ್ದಾರೆ.

ಗುರುವಾರ ನಡೆದ ಮತ ಎಣಿಕೆಯಲ್ಲಿ ಮುರ್ಮು ಅವರು 6,76,803 ಮತಗಳನ್ನು ಪಡೆದರೆ, ಸಿನ್ಹಾ ಅವರು 3,80,177 ಮತಗಳನ್ನು ಪಡೆದರು. 10 ಗಂಟೆಗಳಿಗೂ ಹೆಚ್ಚುಕಾಲ ನಡೆದ ಮತ ಎಣಿಕೆಯ ಬಳಿಕ ಚುನಾವಣಾಧಿಕಾರಿ ಪಿ.ಸಿ. ಮೋದಿ ಅವರು ಮುರ್ಮು ಅವರ ಗೆಲುವನ್ನು ಪ್ರಕಟಿಸಿದರು.

ಮುರ್ಮು ಅವರ ಪರವಾಗಿ ಆಂಧ್ರಪ್ರದೇಶದ ಎಲ್ಲ ಶಾಸಕರು ಮತಚಲಾಯಿಸಿದ್ದಾರೆ. ಸಿನ್ಹಾ ಅವರ ಪರ ಕೇರಳದ ಎಲ್ಲ ಶಾಸಕರು ಮತ ಹಾಕಿದ್ದಾರೆ. ಮೂರನೇ ಸುತ್ತಿನ ಮತ ಎಣಿಕೆಯ ಬಳಿಕ ಶೇ 53ರಷ್ಟು ಮತಗಳನ್ನು ಪಡೆದಿದ್ದ ಮುರ್ಮು ಅವರ ಗೆಲುವು ಖಚಿತವಾಗಿತ್ತು. ಆಗ ಇನ್ನು 10 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮತ ಎಣಿಕೆ ಬಾಕಿಯಿತ್ತು.

ಮುರ್ಮು ಅವರು ಜುಲೈ 25ರಂದು ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಬುಡಕಟ್ಟು ಸಮುದಾಯಕ್ಕೆ ಸೇರಿದ ದ್ರೌಪದಿ ಮುರ್ಮು ಪರವಾಗಿ ಅರುಣಾಚಲ ಪ್ರದೇಶದ ನಾಲ್ವರನ್ನು ಹೊರತುಪಡಿಸಿ ಉಳಿದೆಲ್ಲ ಶಾಸಕರು ಮತ ಹಾಕಿದ್ದಾರೆ.

ಮೂಲಗಳ ಪ್ರಕಾರ, 17 ಸಂಸದರು ಅಡ್ಡ ಮತದಾನ ಮಾಡಿದ್ದು, ಮುರ್ಮು ಪರವಾಗಿ ಮತ ಚಲಾಯಿಸಿದ್ದಾರೆ.

ಸೋಲೊಪ್ಪಿಕೊಂಡಿರುವ ಯಶವಂತ್ ಸಿನ್ಹಾ ಅವರು, ಮುರ್ಮು ಅವರಿಗೆ ಶುಭಾಶಯ ಕೋರಿದ್ದಾರೆ.

‘ನಿಷ್ಪಕ್ಷಪಾತವಾಗಿ ಹಾಗೂ ನಿರ್ಭೀತಿಯಿಂದ ಸಂವಿಧಾನದ ರಕ್ಷಕಿಯಾಗಿ ನೂತನ ರಾಷ್ಟ್ರಪತಿ ಕೆಲಸ ಮಾಡಬೇಕು ಎಂಬುದು ಎಲ್ಲ ಭಾರತೀಯರ ನಿರೀಕ್ಷೆಯಾಗಿದೆ’ ಎಂದು ಅವರು ಹೇಳಿದ್ದಾರೆ. ತಮ್ಮನ್ನು ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ವಿರೋಧ ಪಕ್ಷಗಳಿಗೆ ಸಿನ್ಹಾ ಅವರು ಧನ್ಯವಾದ ಹೇಳಿದ್ದಾರೆ.

ಮುರ್ಮು ಅವರ ನಿವಾಸಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಭೇಟಿ ನೀಡಿ ಶುಭ ಕೋರಿದ್ದಾರೆ. ಭಾರಿ ಸಂಖ್ಯೆಯ ಮತಗಳನ್ನು ಪಡೆದ ಮುರ್ಮು ಅವರನ್ನು ಅಭಿನಂದಿಸಿರುವ ಕೇಂದ್ರ ಸಚಿವ ರಾಜನಾಥ ಸಿಂಗ್, ಈ ಗೆಲುವು ಭಾರತದ ಪ್ರಜಾಪ್ರಭುತ್ವದ ಸಾಮರ್ಥ್ಯವನ್ನು ಬಿಂಬಿಸುತ್ತದೆ ಎಂದು ಹೇಳಿದ್ದಾರೆ.

ಒಡಿಶಾದಲ್ಲಿ ಪುರಸಭೆ ಸದಸ್ಯೆಯಾಗಿ ರಾಜಕೀಯ ಜೀವನ ಆರಂಭಿಸಿದ ಮುರ್ಮು ಅವರು ರಾಷ್ಟ್ರದ ಅತ್ಯುನ್ನತ ಹುದ್ದೆಗೇರಲಿದ್ದಾರೆ. ಜಾರ್ಖಂಡ್‌ನ ರಾಜ್ಯಪಾಲರಾಗಿ ಅವರು ಕೆಲಸ ಮಾಡಿದ್ದಾರೆ.

ಈ ಹುದ್ದೆಗೆ ಏರಲಿರುವ ಬುಡಕಟ್ಟು ಸಮುದಾಯದ ಮೊದಲ ಮಹಿಳೆಯಾಗಲಿದ್ದಾರೆ.

‌ಉಪರಾಷ್ಟ್ರಪತಿ ಚುನಾವಣೆಯಲ್ಲಿ ಭಾಗಿಯಾಗುವುದಿಲ್ಲ: ಟಿಎಂಸಿ

ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಮಾರ್ಗರೇಟ್ ಆಳ್ವ ಅವರನ್ನು ಆಯ್ಕೆ ಮಾಡುವ ವೇಳೆ ತಮ್ಮ ಪಕ್ಷದ ಜೊತೆ ಸಮಾಲೋಚನೆ ನಡೆಸಿಲ್ಲ ಎಂದು ಆರೋಪಿಸಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ),ಉಪರಾಷ್ಟ್ರಪತಿ ಚುನಾವಣೆಯಲ್ಲಿ ಭಾಗಿಯಾಗದಿರಲು ನಿರ್ಧರಿಸಿದೆ.

ಜುಲೈ 17ರಂದು ಸಭೆ ನಡೆಸಿದ್ದ ಪ್ರತಿಪಕ್ಷಗಳ ನಾಯಕರು ಆಳ್ವ ಅವರನ್ನು ಒಮ್ಮತದ ಅಭ್ಯರ್ಥಿ ಎಂದು ಪ್ರಕಟಿಸಿದ್ದರು. ಈ ಸಭೆಯಲ್ಲಿ ಟಿಎಂಸಿ ಭಾಗಿಯಾಗಿರಲಿಲ್ಲ.

ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನಕರ್ ಅವರನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದು ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT