ನವದೆಹಲಿ (ಪಿಟಿಐ): ‘ನೀವು ಹಾಟ್ ಸೀಟಿನಲ್ಲಿ ಇಲ್ಲದಿದ್ದರೆ ಸರ್ಕಾರ ಅಥವಾ ನ್ಯಾಯಾಲಯಗಳನ್ನು ಟೀಕಿಸುವುದು ತುಂಬಾ ಸುಲಭ. ಆದರೆ ವಿಶ್ವದ ಕೆಲವು ಮುಂದುವರಿದ ರಾಷ್ಟ್ರಗಳು ಕೂಡ ಕೋವಿಡ್ -19 ಸಾಂಕ್ರಾಮಿಕ ರೋಗದ ವೇಳೆ ಕಷ್ಟಗಳನ್ನು ಎದುರಿಸಬೇಕಾಯಿತು’ ಎಂದು ಸುಪ್ರೀಂ ಕೋರ್ಟ್, ಎರಡನೇ ಅಲೆಯ ವೇಳೆ ಆಮ್ಲಜನಕದ ಪೂರೈಕೆ ಕೊರತೆಯ ಬಗ್ಗೆ ತನಿಖೆ ನಡೆಸುವಂತೆ ಕೋರಿದ್ದ ಅರ್ಜಿದಾರರಿಗೆ ಸೋಮವಾರ ಹೇಳಿದೆ.
ಈ ವರ್ಷದ ಮಾರ್ಚ್ನಿಂದ ಮೇ ವರೆಗೆ ಕೊರೊನಾ ಎರಡನೇ ಅಲೆಯ ವೇಳೆ ಕೋವಿಡ್ -19 ರೋಗಿಗಳಿಗೆ ಆಮ್ಲಜನಕ ಪೂರೈಸದಿರುವುದು ಮತ್ತು ಆಮ್ಲಜನಕದ ಅಲಭ್ಯತೆ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಅಥವಾ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಆಯೋಗ ಸ್ಥಾಪಿಸಬೇಕು ಎಂದು ಕೋರಿರುವ ಪಿಐಎಲ್ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ನರೇಶ್ ಕುಮಾರ್ ಎಂಬುವವರು ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಬಿ.ವಿ. ನಾಗರತ್ನ ಅವರಿದ್ದ ಪೀಠವು, ‘ದೇಶವು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವ ಈ ಸಮಯದಲ್ಲಿ, ಬಿಕ್ಕಟ್ಟನ್ನು ನಿಭಾಯಿಸುತ್ತಿರುವ ಅಧಿಕಾರಿಗಳ ಸ್ಥೈರ್ಯವನ್ನು ಕುಗ್ಗಿಸುವ ಕೆಲಸವನ್ನೂ ಯಾರೂ ಮಾಡಬಾರದು’ ಎಂದು ತಾಕೀತು ಮಾಡಿದೆ.
ನರೇಶ್ ಕುಮಾರ್ ಪರವಾಗಿ ವಾದಿಸಿದ ವಕೀಲ ಮೇಧಾಂಶು ತ್ರಿಪಾಠಿ, ಆಮ್ಲಜನಕದ ಕೊರತೆಯಿಂದಾಗಿ ಎರಡನೇ ಅಲೆಯ ವೇಳೆ ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ವಾದಿಸಿದರು.
‘ವಿಶ್ವದ ಅತ್ಯಂತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಅವರಿಗೂ ಸಹ ಸಾಂಕ್ರಾಮಿಕ ರೋಗ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ನೀವು ಹಾಟ್ ಸೀಟಿನಲ್ಲಿ ಇಲ್ಲದಿದ್ದರೆ ಸರ್ಕಾರವನ್ನು ಅಥವಾ ನ್ಯಾಯಾಲಯಗಳನ್ನು ಟೀಕಿಸುವುದು ತುಂಬಾ ಸುಲಭ’ ಎಂದು ಪೀಠ, ಅರ್ಜಿದಾರರ ಮೇಲೆ ಅಸಮಾಧಾನ ವ್ಯಕ್ತಪಡಿಸಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.