ಲಖನೌ: ‘ರಾಮ ಜನ್ಮಭೂಮಿ ವಿವಾದ ಕುರಿತ ತೀರ್ಪು ಕಾನೂನು ಆಧಾರದ ಮೇಲೆ ನೀಡಲಾಗಿದೆ, ಧರ್ಮದ ಆಧಾರದ ಮೇಲೆ ಅಲ್ಲ’ ಎಂದು ಸುಪ್ರೀಂಕೋರ್ಟ್ನ ಹಿಂದಿನ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ಹೇಳಿದ್ದಾರೆ.
ರಾಜ್ಯಸಭಾ ಸದಸ್ಯರೂ ಆಗಿರುವ ಅವರು, ವಾರಾಣಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ನೀಡಿದ ತೀರ್ಪು ನನ್ನ ವೈಯಕ್ತಿಕ ನಿರ್ಧಾರವಾಗಿರಲಿಲ್ಲ. ಅದು ಸುಪ್ರೀಂಕೋರ್ಟ್ನ ನಿರ್ಧಾರವಾಗಿತ್ತು’ ಎಂದು ಅವರು ಹೇಳಿದರು.
‘ಪೀಠದಲ್ಲಿದ್ದ ಐವರು ನ್ಯಾಯಮೂರ್ತಿಗಳು 3–4 ತಿಂಗಳ ಅವಧಿಯಲ್ಲಿ 900 ಪುಟಗಳ ತೀರ್ಪು ಬರೆದಿದ್ದಾರೆ. ದೇಶದ ಸಂವಿಧಾನ ಹಾಗೂ ಕಾನೂನಿನ ಆಧಾರದ ಮೇಲೆ ಈ ತೀರ್ಪನ್ನು ನೀಡಲಾಗಿತ್ತೇ ಹೊರತು ಧರ್ಮ ಆಧರಿಸಿ ಅಲ್ಲ’ ಎಂದ ಅವರು, ‘ಒಬ್ಬ ನ್ಯಾಯಾಧೀಶಗೆ ಸಂವಿಧಾನವೇ ಧರ್ಮವಾಗಿರುತ್ತದೆ’ ಎಂದು ಹೇಳಿದರು.
ಗೊಗೊಯಿ ಅವರು ನಿವೃತ್ತಿ ಹೊಂದಿದ ಆರು ತಿಂಗಳ ನಂತರ ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಅವರ ಈ ನಡೆಗೆ ವಿರೋಧ ಪಕ್ಷಗಳಿಂದ ತೀಕ್ಷ್ಣ ಟೀಕೆಗಳು ವ್ಯಕ್ತವಾಗಿದ್ದವು. ಚುನಾವಣೆಗೆ ಸ್ಪರ್ಧಿಸುವ ತಮ್ಮ ನಿರ್ಧಾರವನ್ನು ಆಗ ಅವರು ಸಮರ್ಥಿಸಿಕೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.