ನವದೆಹಲಿ: ಹೊಸದಾಗಿ ಅಂಗೀಕರಿಸಿದ ಕೃಷಿ ಮಸೂದೆಗಳನ್ನು ಇಡೀ ದೇಶವೇ ವಿರೋಧಿಸುತ್ತಿದೆ ಎಂದಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಗ್ಗೆ ರೈತರಿಗೆ ನಂಬಿಕೆ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ರೈತರೊಂದಿಗೆ ಮಾತನಾಡಿದ ನಂತರ, ಅವರಿಗೆ ಮೋದಿ ಸರ್ಕಾರದ ಬಗ್ಗೆ ಯಾವುದೇ ನಂಬಿಕೆಯಿಲ್ಲ ಎಂಬುದು ಸ್ಪಷ್ಟವಾಗಿದೆ. ನಮ್ಮ ಧ್ವನಿಗಳು ನಮ್ಮ ರೈತ ಸಹೋದರರೊಂದಿಗಿದೆ. ಇಂದು ಇಡೀ ದೇಶವು ಈ ಕೃಷಿ ಮಸೂದೆಗಳನ್ನು ವಿರೋಧಿಸುತ್ತದೆ' ಎಂದು ಹಿಂದಿಯಲ್ಲಿ ಬರೆದಿದ್ದಾರೆ.
ರಾಹುಲ್ ಗಾಂಧಿ ಅವರು ಹಂಚಿಕೊಂಡಿರುವ ರೈತರೊಂದಿಗಿನ ಅವರ ಸಂವಾದದ ವಿಡಿಯೊದಲ್ಲಿ, ಈ ಕಾನೂನುಗಳು ದೇಶಾದಾದ್ಯಂತ ಇರುವ ರೈತರ ವಿರುದ್ಧವಾಗಿದೆ ಎಂದು ಹೇಳಲಾಗಿದೆ.
किसानों से बातचीत करके एक बात साफ़ हो गयी- उन्हें मोदी सरकार पर रत्ती भर भी भरोसा नहीं है।
'ಈ ಮಸೂದೆಗಳಿಂದಸಾರ್ವಜನಿಕರಿಗೆ ಅಥವಾ ರೈತರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಇದು ನಿಗಮಗಳಿಗೆ ಮಾತ್ರ ಪ್ರಯೋಜನವನ್ನು ನೀಡುತ್ತದೆ' ಎಂದು ರೈತರೊಬ್ಬರು ಹೇಳಿರುವುದು ವಿಡಿಯೊದಲ್ಲಿದೆ.
ಉಭಯ ಸದನಗಳಲ್ಲೂ ಇತ್ತೀಚೆಗಷ್ಟೇ ಅಂಗೀಕಾರಗೊಂಡ ಕೃಷಿಗೆ ಸಂಬಂಧಿಸಿದ ಪ್ರಮುಖ ಮಸೂದೆಗಳನ್ನು ವಿರೋಧಿಸಿ ವಿರೋಧ ಪಕ್ಷಗಳು, ರೈತರು ಮತ್ತು ಇತರೆ ಸಂಘಟನೆಗಳು ದೇಶದಾದ್ಯಂತ ಇಂದು ಬಂದ್ಗೆ ಕರೆ ನೀಡಿದ್ದವು. ಮಸೂದೆಯನ್ನು ವಿರೋಧಿಸಿ ಹಲವು ಕಡೆ ರೈತರು ಬೀದಿಗಿಳಿದಿದ್ದರು.
ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ 2020, ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ 2020 ರಾಜ್ಯಸಭೆಯಲ್ಲಿಇತ್ತೀಚೆಗೆ ಧ್ವನಿ ಮತದಿಂದ ಅಂಗೀಕಾರಗೊಂಡಿತ್ತು.