ಮುಜಾಫರನಗರ: ನರೇಂದ್ರ ಮೋದಿ ಸರ್ಕಾರದ ಆಡಳಿತ ಅವಧಿಯ ಉಳಿದಿರುವ ಮೂರು ವರೆ ವರ್ಷಗಳು ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ಮುಂದುವರಿಸಲು ರೈತರು ಸಿದ್ಧವಾಗಿದ್ದಾರೆ ಎಂದುಪ್ರಸಿದ್ಧ ರೈತ ಮುಖಂಡ ಮಹೇಂದ್ರ ಸಿಂಗ್ ಟಿಕಾಯತ್ ಅವರ ಪುತ್ರ ನರೇಂದ್ರ ಟಿಕಾಯತ್ ಹೇಳಿಕೆ ನೀಡಿದ್ದಾರೆ.
1986ರಲ್ಲಿ ಮಹೇಂದ್ರ ಸಿಂಗ್ ಟಿಕಾಯತ್ ಹುಟ್ಟು ಹಾಕಿರುವ ಭಾರತೀಯ ಕಿಸಾನ್ ಯೂನಿಯನ್ನಲ್ಲಿ (ಬಿಕೆಯು) ನರೇಂದ್ರ ಟಿಕಾಯತ್ ಯಾವುದೇ ಸ್ಥಾನ ವಹಿಸಿಲ್ಲ. ಆದರೆ ಅವರ ಇಬ್ಬರು ಹಿರಿಯ ಸೋದರರಾದ ನರೇಶ್ ಟಿಕಾಯತ್ ಹಾಗೂ ರಾಕೇಶ್ ಟಿಕಾಯತ್ ಕಳೆದ 100 ದಿನಗಿಂತಲೂ ಹೆಚ್ಚು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಗೆ ಮುಂದಾಳತ್ವ ವಹಿಸುತ್ತಿದ್ದಾರೆ.
ನರೇಂದ್ರ ಟಿಕಾಯತ್ ಬಿಕೆಯು ಅಧ್ಯಕ್ಷ ಮತ್ತು ರಾಕೇಶ್ ಟಿಕಾಯತ್ ರಾಷ್ಟ್ರೀಯ ವಕ್ತಾರ ಹೊಣೆಯನ್ನು ವಹಿಸುತ್ತಿದ್ದಾರೆ.
ಮುಜಾಫರನಗರದಲ್ಲಿ ತಮ್ಮ ನಿವಾಸದಲ್ಲಿ ಪಿಟಿಐ ಜೊತೆ ಮಾತನಾಡಿರುವ 45 ವರ್ಷದ ನರೇಂದ್ರ ಟಿಕಾಯತ್, ಕುಟುಂಬದ ಯಾವುದೇ ಸದಸ್ಯರ ವಿರುದ್ಧ ಆರೋಪವನ್ನು ಸಾಬೀತುಪಡಿಸಿದರೆ ಹೋರಾಟವನ್ನು ಕೈಬಿಡುವುದಾಗಿ ತಿಳಿಸಿದರು.
ಪ್ರತಿಭಟನೆಯಿಂದ ಸಂಗ್ರಹಿಸಿದ ಹಣದಿಂದ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದವು. ಈ ಆರೋಪಗಳನ್ನು ನರೇಂದ್ರ ಟಿಕಾಯತ್ ನಿರಾಕರಿಸಿದ್ದಾರೆ.
ರೈತರ ಹೋರಾಟವನ್ನು ದಮನಿಸಬಹುದೆಂಬ ತಪ್ಪು ಕಲ್ಪನೆಯನ್ನು ಕೇಂದ್ರ ಸರ್ಕಾರ ಹೊಂದಿದೆ. ಈ ಹಿಂದೆ ಹಲವು ಪ್ರತಿಭಟನೆಗಳನ್ನು ಇದೇ ರೀತಿಯಾಗಿ ಮಟ್ಟ ಹಾಕಿದೆ. ಬಹುಶಃ ಈ ರೀತಿಯ ಪ್ರತಿಭಟನೆಯನ್ನು ಎಂದಿಗೂ ಎದುರಿಸಲಿಲ್ಲ. ನಾವು ಕಳೆದ 35 ವರ್ಷಗಳಲ್ಲಿ ಅಂದೋಲನದ ಭಾಗವಾಗಿದ್ದೇವೆ. ತಂತ್ರಗಳನ್ನು ಹೆಣೆಯುವ ಮೂಲಕ ಸಣ್ಣ ಪ್ರತಿಭಟನೆಯನ್ನು ಮಟ್ಟ ಹಾಕಿರುವ ಅನೇಕ ಅನುಭವಗಳು ನಮ್ಮ ಮುಂದಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದಿಂದ ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ನಮ್ಮ ಬೇಡಿಕೆಗಳು ಈಡೇರುವ ವರೆಗೂ ಹೋರಾಟ ಮುಂದುವರಿಯಲಿದೆ. ಈ ಸರ್ಕಾರವು ಇನ್ನೂ ಮೂರು ವರೆ ವರ್ಷಗಳು ಅಧಿಕಾರವನ್ನುಹೊಂದಿದೆ. ಅಲ್ಲಿಯ ವರೆಗೂ ನಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ಎಂಎಸ್ಪಿಯಲ್ಲಿ ಬೆಳೆಗಳನ್ನು ಖರೀದಿಸಲಾಗುವುದು ಎಂದು ಸರ್ಕಾರ ಪದೇ ಪದೇ ಹೇಳುತ್ತಿದೆ. ಹಾಗಿದ್ದರೆ ಅದನ್ನು ಲಿಖಿತವಾಗಿ ಏಕೆ ನೀಡಲು ಸಾಧ್ಯವಿಲ್ಲ? ಎಲ್ಪಿಜಿ ಸಿಲಿಂಡರ್ಗೆ ಸಬ್ಸಿಡಿ ನೀಡುವುದಾಗಿ ಹೇಳಿತ್ತು. ಈಗ ಸಬ್ಸಿಡಿ ಕೂಡಾ ರದ್ದಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.