ಮುಂಬೈ: ‘ಧ್ವನಿ ವರ್ಧಕಗಳ ಬಳಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ರಾಷ್ಟ್ರೀಯ ನೀತಿ ರೂಪಿಸಬೇಕು ಹಾಗೂ ಇದನ್ನು ಮೊದಲು ಬಿಹಾರ, ದೆಹಲಿ, ಗುಜರಾತ್ನಂತಹ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಜಾರಿಗೊಳಿಸಬೇಕು’ ಎಂದು ಶಿವಸೇನಾ ಪಕ್ಷದ ಮುಖಂಡ, ಸಂಸದ ಸಂಜಯ್ ರಾವುತ್ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಧ್ವನಿ ವರ್ಧಕಗಳ ಬಳಕೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ನೀತಿಯನ್ನು ಜಾರಿಗೆ ತರಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡುತ್ತೇನೆ. ಅಲ್ಲದೆ ಈ ನೆಲದ ಕಾನೂನಿಗೆ ಮಹಾರಾಷ್ಟ್ರಬದ್ಧವಾಗಿರುವುದರಿಂದ ಸಹಜವಾಗಿಯೇ ಆ ನೀತಿಯನ್ನು ನಾವು ಪಾಲಿಸುತ್ತೇವೆ’ ಎಂದು ಹೇಳಿದರು.
‘ಧ್ವನಿವರ್ಧಕಗಳ ಬಳಕೆ ವಿಷಯದಲ್ಲಿ ನಿಮ್ಮವರೇ (ಬಿಜೆಪಿ) ವಿವಾದವನ್ನುಂಟು ಮಾಡಿದ್ದರಿಂದ ರಾಷ್ಟ್ರೀಯ ನೀತಿಯ ಅವಶ್ಯಕತೆ ಇದೆ. ಉತ್ತರ ಪ್ರದೇಶ, ಗುಜರಾತ್ನಲ್ಲಿ ಇದುವರೆಗೂ ಧ್ವನಿವರ್ಧಕಗಳನ್ನು ತೆರವು ಮಾಡಿಲ್ಲ’ ಎಂದು ಹೇಳಿದರು.
‘ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಾಷ್ಟ್ರೀಯ ನೀತಿಯನ್ನು ರೂಪಿಸಿದೆ. ಆದರೆ, ಈಶಾನ್ಯ ರಾಜ್ಯಗಳ ಹಾಗೂ ಗೋವಾ ಮುಖ್ಯಮಂತ್ರಿ ಇದನ್ನು ವಿರೋಧಿಸಿದ್ದರಿಂದ ಆ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿ ಮಾಡಿಲ್ಲ. ಈ ವಿಷಯದಲ್ಲಿ ರಾಷ್ಟ್ರೀಯ ನೀತಿ ಎಲ್ಲಿದೆ?’ ಎಂದು ರಾವುತ್ ಅವರು ಬಿಜೆಪಿಯನ್ನು ಪ್ರಶ್ನಿಸಿದರು.