ನವದೆಹಲಿ: ಗಣರಾಜ್ಯೋತ್ಸವ ಕಾರ್ಯಕ್ರಮಗಳಿಗೆ ತೆರೆಎಳೆಯುವ ನಿಮಿತ್ತ ಜ.29ರಂದು ಇಲ್ಲಿನ ವಿಜಯ್ಚೌಕ್ನಲ್ಲಿ ನಡೆಸುವ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮದಿಂದ ‘ಅಬೈಡ್ ವಿತ್ ಮಿ’ ಗೀತೆ ಕೈಬಿಡಲು ಸರ್ಕಾರ ನಿರ್ಧರಿಸಿದೆ.
ಇದು, ಮಹಾತ್ಮಗಾಂಧಿ ಅವರಿಗೆ ಅತ್ಯಂತ ಪ್ರಿಯವಾದ ಗೀತೆಯಾಗಿತ್ತು. ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮ ಮುಗಿಯುವ ದ್ಯೋತಕವಾಗಿ ನುಡಿಸಲಾಗುತ್ತಿತ್ತು. ಶತಮಾನಗಳಷ್ಟು ಹಳೆಯದಾದ ಸೇನಾ ಸಂಪ್ರದಾಯದಲ್ಲಿ ಇದು ಬಳಕೆಯಲ್ಲಿದೆ.
‘ಶಾಶ್ವತ ಜ್ಯೋತಿ’ಯನ್ನು ಇಂಡಿಯಾ ಗೇಟ್ ಬಳಿಯ ಅಮರ್ ಜವಾನ್ ಜ್ಯೋತಿ ಸ್ಥಳದಿಂದ ರಾಷ್ಟ್ರೀಯ ಯುದ್ಧ ಸ್ಮಾರಕ ಸ್ಥಳಕ್ಕೆ ಸ್ಥಳಾಂತರಿಸಿದ್ದ ತೀರ್ಮಾನದ ಹಿಂದೆಯೇ ಸರ್ಕಾರದ ಈ ನಿರ್ಧಾರವೂ ಹೊರಬಿದ್ದಿದೆ.
ಗಾಂಧೀಜಿ ಅವರಿಗೆ ಪ್ರಿಯವಾಗಿದ್ದ ‘ಅಬೈಡ್ ವಿತ್ ಮಿ’ ಗೀತೆಯು ‘ಜೀವನಪೂರ್ತಿ, ಸಾವಿನವರೆಗೂ ಜೊತೆಗೇ ಇರು’ ಎಂದು ದೇವರನ್ನು ಕೋರುವ ಪ್ರಾರ್ಥನಾ ಗೀತೆಯಾಗಿದೆ. 1847ರಲ್ಲಿ ಸ್ಕಾಟ್ಲೆಂಡ್ನ ಹೆನ್ರಿ ಫ್ರಾನ್ಸಿಸ್ ಲೈಟ್ ಅವರು ರಚಿಸಿದ್ದರು. ಅವರು ಕ್ಷಯರೋಗದಿಂದ ಮೃತಪಟ್ಟರು.