ನವದೆಹಲಿ: ಪ್ರೌಢ ಶಿಕ್ಷಣದ ಹೊಸ ಯೋಜನೆ 'ನವ ಭಾರತ ಸಾಕ್ಷರತಾ ಕಾರ್ಯಕ್ರಮಕ್ಕೆ' ಕೇಂದ್ರ ಸರ್ಕಾರವು ಸಮ್ಮತಿಸಿದೆ. ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಅನಕ್ಷಸ್ಥರಿಗೆ ಶಿಕ್ಷಣ ನೀಡುವ ಕಾರ್ಯಕ್ರಮ ಇದಾಗಿದೆ.
ಪ್ರೌಢ ಶಿಕ್ಷಣದ ಬದಲು 'ಸರ್ವರಿಗೆ ಶಿಕ್ಷಣ' ಎಂಬ ಸಾಲನ್ನು ಕೇಂದ್ರ ಸರ್ಕಾರವು ಬಳಸುತ್ತಿದ್ದು, 2022ರಿಂದ 2027ರ ವರೆಗೂ ಈ ಸಾಕ್ಷರತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (2020) ಪ್ರೌಢ ಶಿಕ್ಷಣ ಮತ್ತು ನಿರಂತರ ಕಲಿಕೆಗೆ ಸಂಬಂಧಿಸಿದಂತೆ ಹಲವು ಶಿಫಾರಸುಗಳನ್ನು ನೀಡಿದೆ. ಸಂಪನ್ಮೂಲಗಳ ಹೆಚ್ಚಳ, ಪ್ರೌಢ ಶಿಕ್ಷಣಕ್ಕೆ ಸಂಬಂಧಿಸಿದ ತರಬೇತಿಯ ಪೂರ್ಣ ಪಠ್ಯವು ಆನ್ಲೈನ್ನಲ್ಲಿ ಲಭ್ಯವಾಗುವಂತೆ ಮಾಡುವ ಬಗ್ಗೆ 2021–22ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಘೋಷಿಸಲಾಗಿತ್ತು.
Government approves 'New India Literacy Programme', a new scheme of Adult Education for FYs 2022-27
— PIB India (@PIB_India) February 16, 2022
The scheme will cover non-literates of the age of 15 years and above in all States/UTs in the country
Read more: https://t.co/qd0FMEfRFy
ಪ್ರಾಥಮಿಕ ಸಾಕ್ಷರತೆಗಷ್ಟೇ ಸೀಮಿತವಾಗದೆ 21ನೇ ಶತಮಾನದ ನಾಗರಿಕರಿಗೆ ಅಗತ್ಯವಿರುವ ಶೌಶಲಗಳನ್ನು ಕಲಿಸುವುದು ನವ ಭಾರತ ಸಾಕ್ಷರತಾ ಕಾರ್ಯಕ್ರಮದ ಉದ್ದೇಶವಾಗಿದೆ. ಹಣಕಾಸು, ಡಿಜಿಟಲ್ ಸಾಕ್ಷರತೆ, ಆರೋಗ್ಯ, ಜಾಗೃತಿ, ಮಕ್ಕಳ ಪೋಷಣೆ, ಶಿಕ್ಷಣ ಹಾಗೂ ಕುಟುಂಬ ಕಲ್ಯಾಣಕ್ಕೆ ಸಂಬಂಧಿಸಿದ ವಿಷಯಗಳ ಕಲಿಕೆ. ಕಲೆ, ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ಸಂಸ್ಕೃತಿ ಸೇರಿದಂತೆ ಆಸಕ್ತ ವಿಷಯಗಳಲ್ಲಿ ಶಿಕ್ಷಣ ಮುಂದುವರಿಸಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ.
ಸ್ವಯಂ ಸೇವಕರಿಗೆ ಆನ್ಲೈನ್ನಲ್ಲಿ ತರಬೇತಿ ನೀಡುವ ಮೂಲಕ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದು ಪಿಐಬಿ ಪ್ರಕಟಿಸಿದೆ. ತರಬೇತಿ, ಕಾರ್ಯಾಗಾರಗಳು ಭೌತಿಕವಾಗಿ ನಡೆಯುವ ಸಾಧ್ಯತೆ ಇದೆ.
ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ (ಎನ್ಐಸಿ), ಎನ್ಸಿಇಆರ್ಟಿ ಹಾಗೂ ಎನ್ಐಒಎಸ್ ಸಹಭಾಗಿತ್ವದಲ್ಲಿ ಸಾಕ್ಷರತಾ ಕಾರ್ಯಕ್ರಮ ಮುನ್ನಡೆಸಲು ನಿರ್ಧರಿಸಲಾಗಿದೆ. ಐದು ವರ್ಷಗಳಲ್ಲಿ 5 ಕೋಟಿ ಜನರ ಕಲಿಕೆ ಸಾಧ್ಯವಾಗಿಸುವ ಗುರಿ ಇದೆ.
ನವ ಭಾರತ ಸಾಕ್ಷರತಾ ಕಾರ್ಯಕ್ರಮಕ್ಕೆ ಕೇಂದ್ರದಿಂದ ₹700 ಕೋಟಿ ಮತ್ತು ರಾಜ್ಯಗಳಿಂದ ₹337.90 ಕೋಟಿ ಸೇರಿದಂತೆ ಒಟ್ಟು ₹1,037.90 ಕೋಟಿ ವೆಚ್ಚವಾಗುವುದಾಗಿ ಅಂದಾಜಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.