ನವದೆಹಲಿ: ಕೊರೊನಾ ವೈರಸ್ ಪರಿಸ್ಥಿತಿಯನ್ನು ನಿಭಾಯಿಸುವ ಬಗ್ಗೆ ಕೇಂದ್ರವು ಅತ್ಯಂತ ನಿರ್ಲಕ್ಷ್ಯ ಮತ್ತು ಅತಿಯಾದ ಆತ್ಮವಿಶ್ವಾಸವನ್ನು ಹೊಂದಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಸಾಂಕ್ರಾಮಿಕ ರೋಗ ಇನ್ನೂ ಮುಗಿದಿಲ್ಲ ಎಂದಿದ್ದಾರೆ.
ದಕ್ಷಿಣ ಆಫ್ರಿಕ ಮತ್ತು ಬ್ರೆಜಿಲ್ನಲ್ಲಿ ಪತ್ತೆಯಾದ ಕೊರೊನಾ ವೈರಸ್ ರೂಪಾಂತರಗಳು ಭಾರತಕ್ಕೂ ಪ್ರವೇಶಿಸಿವೆ ಎಂದು ವರದಿಯಾದ ನಂತರ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಭಾರತ ಸರ್ಕಾರವು ತೀವ್ರ ನಿರ್ಲಕ್ಷ್ಯ ಮತ್ತು ಕೋವಿಡ್-19 ಬಗ್ಗೆ ಹೆಚ್ಚಿನ ವಿಶ್ವಾಸವನ್ನು ಹೊಂದಿದೆ. ಆದರೆ ಕೊರೊನಾ ವೈರಸ್ ರೋಗವು ಇನ್ನು ಕೊನೆಗೊಂಡಿಲ್ಲ' ಎಂದು ಹೇಳಿದ್ದಾರೆ.
ಭಾರತದಲ್ಲಿ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ SARS-CoV-2 ರೂಪಾಂತರದ ಸೋಂಕು ನಾಲ್ಕು ಜನರಲ್ಲಿ ಪತ್ತೆ ಮಾಡಲಾಗಿದೆ ಮತ್ತು ಮತ್ತೊಬ್ಬರಿಗೆ ಬ್ರೆಜಿಲ್ನಲ್ಲಿ ಪತ್ತೆಯಾದ ಕೊರೊನಾ ವೈರಸ್ ರೂಪಾಂತರದ ಸೋಂಕುಪೀಡಿತರಾಗಿದ್ದಾರೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಭಾರತಕ್ಕೆ ಹಿಂದಿರುಗಿದವರ ಪೈಕಿ ನಾಲ್ವರಲ್ಲಿ ದಕ್ಷಿಣ ಆಫ್ರಿಕಾದ ರೂಪಾಂತರ ಸೋಂಕು ಪತ್ತೆಯಾಗಿದೆ. ಒಬ್ಬರು ಅಂಗೋಲಾದಿಂದ, ತಾಂಜೇನಿಯಾದಿಂದ ಒಬ್ಬರು ಮತ್ತು ದಕ್ಷಿಣ ಆಫ್ರಿಕಾದಿಂದ ಬಂದ ಇಬ್ಬರಲ್ಲಿ ಜನವರಿಯಲ್ಲಿ ರೂಪಾಂತರ ಸೋಂಕು ಪತ್ತೆಯಾಗಿತ್ತು ಎಂದು ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ ತಿಳಿಸಿದ್ದಾರೆ.
11,610 ಹೊಸ ಪ್ರಕರಣಗಳೊಂದಿಗೆ ಭಾರತದ ಕೋವಿಡ್ ಸೋಂಕಿತರ ಸಂಖ್ಯೆಯು ಬುಧವಾರದ ವೇಳೆಗೆ 1,09,37,320ಕ್ಕೆ ಏರಿಕೆಯಾಗಿದೆ. ಈ ಪೈಕಿ 1,06,44,858 ಜನರು ಈವರೆಗೆ ಗುಣಮುಖರಾಗಿದ್ದು,1,55,913 ಜನರು ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.