ನವದೆಹಲಿ: ಈ ತಿಂಗಳು ಹಾಗೂ ನವೆಂಬರ್ನಲ್ಲಿ ಹಬ್ಬಗಳ ಸಾಲು. ನವರಾತ್ರಿ, ದುರ್ಗಾ ಪೂಜೆ, ನಂತರ ದೀಪಾವಳಿ ಸಂಭ್ರಮ. ಆದರೆ, ಕೋವಿಡ್–19 ನಡುವೆಯೇ ಈ ಹಬ್ಬಗಳನ್ನು ಆಚರಿಸಬೇಕಾಗಿರುವ ಕಾರಣ ಜನರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಜನರಲ್ಲಿ ಜಾಗೃತಿ ಮೂಡಿಸಲು‘ಕೋವಿಡ್–19: ಸಮರ್ಪಕ ವರ್ತನೆ’ ಎಂಬ ಆಂದೋಲನ ಆರಂಭಿಸುವ ಕುರಿತು ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯಕುಮಾರ್ ಭಲ್ಲಾ ಅಧ್ಯಕ್ಷತೆಯಲ್ಲಿ ಮಂಗಳವಾರ ಸಭೆ ನಡೆಯಿತು. ವಿವಿಧ ಸಚಿವಾಲಯಗಳು, ಕೇಂದ್ರೀಯ ಪೊಲೀಸ್ ಪಡೆಗಳ ಉನ್ನತ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
‘ಹಬ್ಬಗಳ ಸಂದರ್ಭದಲ್ಲಿ ಜನರ ಓಡಾಟ ಇನ್ನೂ ಹೆಚ್ಚಾಗುವುದು. ಕೋವಿಡ್ ವಿರುದ್ಧದ ಹೋರಾಟವನ್ನೂ ಕಡೆಗಣಿಸುವಂತಿಲ್ಲ. ಇಂಥ ಸಂದರ್ಭದಲ್ಲಿ ನಮ್ಮ ವರ್ತನೆ ಹೇಗಿರಬೇಕು ಎಂಬುದನ್ನು ಜನರಿಗೆ ತಿಳಿಸಬೇಕು. ಈ ನಿಟ್ಟಿನಲ್ಲಿ ಯಾವ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು‘ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
‘ಮಾಸ್ಕ್ ಧರಿಸುವುದು, ವ್ಯಕ್ತಿಗತ ಅಂತರ ಕಾಪಾಡುವುದು ಹಾಗೂ ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಚರ್ಚೆ ವೇಳೆ ಒತ್ತು ನೀಡಲಾಯಿತು’ ಎಂದೂ ಅವರು ತಿಳಿಸಿದರು.