ಜೈಪುರ: ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಲೇಬೇಕಾಗುತ್ತದೆ ಎಂದಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಆಗ ಬ್ರಿಟಿಷರೇ ಭಾರತದ ರೈತರ ಮುಂದೆ ನಿಲ್ಲಲು ಸಾಧ್ಯವಾಗದಿದ್ದಾಗ, ಈಗ ಈ ನರೇಂದ್ರ ಮೋದಿ ಯಾವ ಲೆಕ್ಕ ಎಂದು ಹೇಳಿದ್ದಾರೆ.
ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯ ಪದಂಪೂರ್ ಪಟ್ಟಣದಲ್ಲಿ ಶುಕ್ರವಾರ ನಡೆದ ತಮ್ಮ ಎರಡನೇ ರೈತರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ 40 ಪ್ರತಿಶತ ಜನರು ಕೃಷಿಯಲ್ಲಿ ತೊಡಗಿದ್ದಾರೆ. ಇದು ರಾಷ್ಟ್ರವನ್ನು ಪೋಷಿಸುತ್ತಿರುವ 'ಭಾರತ ಮಾತೆ'ಯ ವ್ಯವಹಾರವಾಗಿದೆ ಎಂದು ಹೇಳಿದರು.
ರೈತರಿಗೆ ಸಂಬಂಧಪಟ್ಟಿದೆ ಎನ್ನುವ ಕಾರಣಕ್ಕಾಗಿ ಮಾತ್ರ ಕೃಷಿ ಕಾನೂನುಗಳ ವಿರುದ್ಧದ ಆಂದೋಲನವು ದೇಶದಾದ್ಯಂತ ಹರಡುತ್ತಿದೆ ಎಂದಲ್ಲ. ಇದು ಕಾರ್ಮಿಕರು, ವ್ಯಾಪಾರಿಗಳು, ಸಣ್ಣ ಮತ್ತು ಮಧ್ಯಮ ಉದ್ಯಮಿಗಳು ಮತ್ತು ಮಧ್ಯಮ ವರ್ಗದವರ ಸಮಸ್ಯೆಯೂ ಆಗಿದೆ ಎಂದರು.