ಗುರು ರವಿದಾಸ್ ಜಯಂತಿ: ಪಂಜಾಬ್ ವಿಧಾನಸಭೆ ಚುನಾವಣೆ ಫೆ. 20ಕ್ಕೆ ಮುಂದೂಡಿಕೆ

ನವದೆಹಲಿ: ಚುನಾವಣಾ ಆಯೋಗವು ಪಂಜಾಬ್ ವಿಧಾನಸಭೆ ಚುನಾವಣೆ ದಿನಾಂಕವನ್ನು ಫೆಬ್ರುವರಿ 20ಕ್ಕೆ ಮುಂದೂಡಿದೆ. ಈ ಮೊದಲು ಫೆಬ್ರುವರಿ 14ಕ್ಕೆ ಮತದಾನ ನಿಗದಿಯಾಗಿತ್ತು.
ಆಡಳಿತಾರೂಢ ಕಾಂಗ್ರೆಸ್ ಸೇರಿದಂತೆ, ಬಿಜೆಪಿ, ಪಂಜಾಬ್ ಲೋಕ ಕಾಂಗ್ರೆಸ್ ಹಾಗು ಇನ್ನಿತರ ಪಕ್ಷಗಳು ಮತದಾನ ದಿನಾಂಕವನ್ನು ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದವು. ಹೀಗಾಗಿ ದಿನಾಂಕ ಮರುನಿಗದಿಗೊಳಿಸಲಾಗಿದೆ.
ಫೆಬ್ರುವರಿ 16ರಂದು ಗುರು ರವಿದಾಸ್ ಜಯಂತಿ ಇದೆ. ಹೀಗಾಗಿ ಸುಮಾರು 20 ಲಕ್ಷದಷ್ಟು ಜನರು ಉತ್ತರ ಪ್ರದೇಶದ ಬನಾರಸ್ಗೆ ಭೇಟಿ ನೀಡಿ ಜಯಂತಿ ಆಚರಿಸಲಿದ್ದಾರೆ. ಅವರಿಗೆ, ಮತದಾನದಲ್ಲಿ ಪಾಲ್ಗೊಳ್ಳಲು ತೊಂದರೆಯಾಗದಂತೆ ನೋಡಿಕೊಳ್ಳಲು, ಚುನಾವಣೆಯನ್ನು ಕನಿಷ್ಠ ಆರು ದಿನ ಮುಂದೂಡಬೇಕು ಎಂದು ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರಿಗೆ ಜನವರಿ 13ರಂದು ಪತ್ರ ಬರೆದಿದ್ದರು.
ಚುನಾವಣಾ ಆಯೋಗದ ಪ್ರಕಟಣೆ ಪ್ರಕಾರ, ನಾಮಪತ್ರ ಸಲ್ಲಿಸಲು ಫೆಬ್ರುವರಿ 1 ಕೊನೆಯ ದಿನವಾಗಿದ್ದು, ವಾಪಸ್ ಪಡೆಯಲು ಫೆಬ್ರುವರಿ 2 ಕೊನೆ ದಿನ. ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.