ಮುಂಬೈ: 'ಹನುಮಾನ್ ಚಾಲೀಸಾ ಪಠಣ ಮುಂದುವರಿಕೆ'

ಮುಂಬೈ: ‘ಮಸೀದಿ ಗಳಲ್ಲಿ ಧ್ವನಿವರ್ಧಕಗಳನ್ನು ಸ್ಥಗಿತಗೊಳಿಸುವವರೆಗೆ ತಮ್ಮ ಪಕ್ಷದ ಕಾರ್ಯಕರ್ತರು ಹೆಚ್ಚಿನ ಪ್ರಮಾಣದಲ್ಲಿ ಹನುಮಾನ್ ಚಾಲೀಸಾ ಪಠಿಸುವುದನ್ನು ಮುಂದುವರಿಸುತ್ತಾರೆ’ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನಾದ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಬುಧವಾರ ತಿಳಿಸಿದರು.
‘ತಮ್ಮ ಪಕ್ಷದ ಕಾರ್ಯಕರ್ತರನ್ನು ಬಂಧಿಸಿರುವ ಮಹಾರಾಷ್ಟ್ರ ಪೊಲೀಸರು, ಕಾನೂನು ಪಾಲಿಸದವರನ್ನು ಹಾಗೆಯೇ ಬಿಟ್ಟಿದ್ದಾರೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
‘ಮಸೀದಿಗಳ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸಲು ನಾನು ಕರೆ ನೀಡಿದ ಬಳಿಕ, ಶೇ 90– 92ರಷ್ಟು ಮಸೀದಿಗಳು ಬೆಳಗಿನ ಆಜಾನ್ ಸಂದರ್ಭದಲ್ಲಿ ಧ್ವನಿವರ್ಧಕಗಳನ್ನು ಬಳಸುತ್ತಿಲ್ಲ’ ಎಂದು ಠಾಕ್ರೆ ತಿಳಿಸಿದರು.
‘ಮುಂಬೈನಲ್ಲಿ ಇರುವ 1,104 ಮಸೀದಿಗಳ ಪೈಕಿ ಬುಧವಾರ 135 ಮಸೀದಿಗಳು ಬೆಳಗಿನ ನಮಾಜ್ ವೇಳೆ ಧ್ವನಿವರ್ಧಕಗಳನ್ನು ಬಳಸಿವೆ. ಕಾನೂನು ಉಲ್ಲಂಘಿಸಿದ ಈ ಮಸೀದಿಗಳ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳುತ್ತೀರಿ’ ಎಂದು ಅವರು ಸರ್ಕಾರ ಮತ್ತು ಪೊಲೀಸರನ್ನು ಪ್ರಶ್ನಿಸಿದರು.
ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಬುಧವಾರ ಬೆಳಿಗ್ಗೆ ಮುಂಬೈನ ಚಾರ್ಕೋಪ್ ಪ್ರದೇಶದ ಮಸೀದಿಯ ಬಳಿ ಹನುಮಾನ್ ಚಾಲೀಸಾವನ್ನು ಧ್ವನಿವರ್ಧಕದ ಮೂಲಕ ಪಠಿಸಿದರು.ಮಹಾರಾಷ್ಟ್ರದಾದ್ಯಂತ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಮುಂಬೈ, ಪುಣೆ ಸೇರಿದಂತೆ ರಾಜ್ಯದಾದ್ಯಂತ ಪೊಲೀಸರು ಹಲವು ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರದಲ್ಲಿಯಾವುದೇ ರೀತಿ ಧ್ವನಿವರ್ಧಕಗಳ ಮಾರ್ಗಸೂಚಿ ಉಲ್ಲಂಘನೆಯಾಗಿಲ್ಲ. ‘ತಮ್ಮ ಪಕ್ಷಕ್ಕೆ ಯಾರೂ ಹಿಂದುತ್ವದ ಪಾಠವನ್ನು ಕಲಿಸಬೇಕಿಲ್ಲ’ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.