ಮುಂಬೈ: ಮುಂಬೈನಲ್ಲಿ ಫೋಟೊ ಜರ್ನಲಿಸ್ಟ್ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಮೂವರು ಅಪರಾಧಿಗಳಿಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿ ಬಾಂಬೆ ಹೈಕೋರ್ಟ್ ಗುರುವಾರ ಆದೇಶಿಸಿತು.
ಅರ್ಜಿ ವಿಚಾರಣೆ ನಡೆಸಿದ, ನ್ಯಾಯಮೂರ್ತಿಗಳಾದ ಸಾಧನಾ ಜಾಧವ್ ಹಾಗೂ ಪೃಥ್ವಿರಾಜ್ ಚವಾಣ್ ಅವರಿದ್ದ ವಿಭಾಗೀಯ ನ್ಯಾಯಪೀಠ, ‘ಅಪರಾಧಿಗಳು ತಾವು ಎಸಗಿದ ಕೃತ್ಯಕ್ಕಾಗಿ ಬದುಕಿರುವವರೆಗೆ ಪಶ್ಚಾತ್ತಾಪ ಪಡಬೇಕು’ ಎಂದು ಹೇಳಿತು.
ವಿಜಯ್ ಜಾಧವ್, ಮೊಹಮ್ಮದ್ ಕಾಸಿಮ್ ಶೇಖ್ ಹಾಗೂ ಮೊಹಮ್ಮದ್ ಅನ್ಸಾರಿ ಅಪರಾಧಿಗಳು.
‘ಅತ್ಯಾಚಾರ ಎಂಬುದು ಮಾನವ ಹಕ್ಕುಗಳ ಉಲ್ಲಂಘನೆ. ಈ ಮೂವರು ಎಸಗಿದ ಕೃತ್ಯ ಸಮಾಜದ ಆತ್ಮಸಾಕ್ಷಿಯನ್ನೇ ಅಲುಗಾಡಿಸಿತ್ತು. ಆದರೆ, ಅಪರಾಧಿಗಳನ್ನು ಗಲ್ಲಿಗೇರಿಸಿದರೆ ಅದು ಪಶ್ಚಾತ್ತಾಪ ಪಡುವ ಅವಕಾಶಕ್ಕೆ ಅಂತ್ಯ ಹಾಡಿದಂತೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಮುಂಬೈನಲ್ಲಿರುವ ಶಕ್ತಿ ಮಿಲ್ಸ್ನ ಆವರಣದಲ್ಲಿ 2013ರ ಆಗಸ್ಟ್ 22ರಂದು ಈ ಮೂವರು, 22 ವರ್ಷದ ಫೋಟೊ ಜರ್ನಲಿಸ್ಟ್ ಮೇಲೆ ಅತ್ಯಾಚಾರ ಎಸಗಿದ್ದರು.
ವಿಚಾರಣಾ ಕೋರ್ಟ್ ಈ ಮೂವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಿ 2014ರ ಮಾರ್ಚ್ನಲ್ಲಿ ಆದೇಶಿಸಿತ್ತು.