ನವದೆಹಲಿ:ಕೋವಿಡ್ ನಿಯಮಗಳ ಕಡ್ಡಾಯ ಪಾಲನೆಯೊಂದಿಗೆ ದೆಹಲಿಯ ನಿಜಾಮುದ್ದೀನ್ ಮರ್ಕಜ್ನ ಮಸೀದಿಯ ನೆಲಮಹಡಿಯಲ್ಲಿ ನಮಾಜು ಮಾಡಲು, ಸೂಕ್ತ ವ್ಯಕ್ತಿಗಳಿಗೆ ದೆಹಲಿ ಹೈಕೋರ್ಟ್ ತನ್ನ ವಿವೇಚನೆಯಡಿ ಅನುಮತಿ ನೀಡಬಹುದಾಗಿದೆ ಎಂದು ಕೇಂದ್ರ ಸರ್ಕಾರ ಕೋರ್ಟ್ಗೆ ಸಲ್ಲಿಸಿದ ತನ್ನ ವರದಿಯಲ್ಲಿ ಹೇಳಿದೆ.
ಕೋರ್ಟ್ ಕೇಳಿದ್ದಂತೆ ಕೇಂದ್ರ ಸಲ್ಲಿಸಿರುವ ವರದಿಯಲ್ಲಿ ಎಲ್ಲ ಪ್ರಾರ್ಥನಾ ಸ್ಥಳಗಳನ್ನು ಮುಚ್ಚಲಾಗಿದೆಯೇ ಎಂಬ ಕುರಿತು ಕೇಂದ್ರ ಸರ್ಕಾರ ಸ್ಪಷ್ಟವಾಗಿ ತಿಳಿಸಿಲ್ಲ. ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಜನಸಂದಣಿ ಸೇರುವುದನ್ನು ನಿರ್ಬಂಧಿಸಿ ಆದೇಶಿಸಲಾಗಿದೆ ಎಂದು ತಿಳಿಸಿದೆ.
ಲಜಪತ್ ನಗರ ಉಪ ವಿಭಾಗದ ಎಸಿಪಿ ಅವರ ವರದಿ ಅವಲೋಕನೆ ಬಳಿಕ ನ್ಯಾಯಮೂರ್ತಿ ಮುಕ್ತಾ ಗುಪ್ತಾ ಅವರು, ಕೋವಿಡ್ ಮಾರ್ಗಸೂಚಿ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಪ್ರಾರ್ಥನಾ ಸ್ಥಳಗಳನ್ನು ಮುಚ್ಚಿರುವ ಕುರಿತು ದೆಹಲಿ ಪ್ರಾಕೃತಿಕ ವಿಕೋಪ ನಿರ್ವಹಣಾ ಪ್ರಾಧಿಕಾರವು (ಡಿಡಿಎಂಎ) ಅಧಿಸೂಚನೆಯಲ್ಲಿ ಸ್ಪಷ್ಟತೆ ಇಲ್ಲ ಎಂದರು.
ಇತರೆ ಧಾರ್ಮಿಕ ಸ್ಥಳಗಳು ತೆರೆದಿರುವ ಕುರಿತು ನಿಮ್ಮ ವರದಿಯಲ್ಲಿ ಸ್ಪಷ್ಟತೆ ಇಲ್ಲ. ನಾವು ಗಮನಿಸಿದಂತೆ ಬಹುತೇಕ ಧಾರ್ಮಿಕ ಸ್ಥಳಗಳು ತೆರೆದಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಡಿಡಿಎಂಎ ಅಧಿಸೂಚನೆ ಪ್ರಕಾರ, ಎಲ್ಲ ಧಾರ್ಮಿಕ ಸ್ಥಳಗಳು ತೆರೆದಿವೆಯೇ ಅಥವಾ ಮುಚ್ಚಲ್ಪಟ್ಟಿವೆಯೇ ಎಂಬುದರ ಬಗ್ಗೆ ವಸ್ತುಸ್ಥಿತಿ ವರದಿ ಸಲ್ಲಿಸಬೇಕು ಎಂಬ ಬಗ್ಗೆ ನ್ಯಾಯಾಲಯ ಏಪ್ರಿಲ್ 13ರಂದು ನೀಡಿದ ಆದೇಶ ಸ್ಪಷ್ಟವಾಗಿತ್ತು ಎಂದು ನ್ಯಾಯಮೂರ್ತಿ ಮುಕ್ತಾ ಗುಪ್ತಾ ಅವರು ತಿಳಿಸಿದರು.