ನವದೆಹಲಿ: ‘ಹಿಜಡಾ ವಿದೇಶಾಂಗ ನೀತಿ...’ ಹೀಗೆಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ವಿದೇಶಾಂಗ ಸಚಿವ ಜೈಶಂಕರ್ ವಿರುದ್ಧ ಕಿಡಿಕಾರಿದ್ದಾರೆ.
ಕ್ವಾಡ್, ಬ್ರಿಕ್ಸ್ ಸಭೆಗಳಲ್ಲಿ ಭಾಗವಹಿಸಲು ವಿದೇಶಾಂಗ ಸಚಿವ ಜೈಶಂಕರ್ ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ ಎಂಬ ಸುದ್ದಿಯೊಂದನ್ನು ಟ್ವಿಟರ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದರು. ಅದನ್ನು ಸುಬ್ರಮಣಿಯನ್ ಸ್ವಾಮಿ ಅವರಿಗೆ ಟ್ಯಾಗ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸ್ವಾಮಿ, ‘ಹಿಜ್ಡಾ ವಿದೇಶಾಂಗ ನೀತಿ’ ಎಂದು ಮೂದಲಿಸಿದ್ದಾರೆ.
Hijda foreign policy
— Subramanian Swamy (@Swamy39) September 19, 2022
ಕ್ವಾಡ್, ಬ್ರಿಕ್ಸ್ ದೇಶಗಳ ವಿದೇಶಾಂಗ ಮಂತ್ರಿಗಳ ಸಭೆಗಳಲ್ಲಿ ಮತ್ತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಲು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಭಾನುವಾರದಿಂದ 10 ದಿನಗಳ ಕಾಲ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ.
ಸ್ವಾಮಿ ಅವರು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ನಡೆ ಬಗ್ಗೆ ದಾಳಿ ಮಾಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಮೇ ತಿಂಗಳಲ್ಲಿ, ಜಿ-7 ಸಭೆಯಲ್ಲಿ ಪಾಲ್ಗೊಳ್ಳಲು ಲಂಡನ್ ಪ್ರವಾಸ ಕೈಗೊಂಡಿದ್ದ ಜೈಶಂಕರ್ ಅವರನ್ನು ‘ವೇಟರ್’ ಎಂದು ಅಪಹಾಸ್ಯ ಮಾಡಿದ್ದರು. ಲಂಡನ್ನ ಹೋಟೆಲ್ನಲ್ಲಿರುವ ಜೈಶಂಕರ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಜಿ-7 ಸಭೆಯಲ್ಲಿ ಭಾಗವಹಿಸಿದ್ದಾರೆ. ಹೋಟೆಲ್ ಕೊಠಡಿ ಮೂಲಕ ಶೃಂಗಶಭೆಯಲ್ಲಿ ಭಾಗವಹಿಸಲು ಬ್ರಿಟನ್ ಪ್ರವಾಸ ಯಾಕೆ ಬೇಕು? ತೆರಿಗೆದಾರರ ಹಣವನ್ನು ಏಕೆ ವ್ಯರ್ಥ ಮಾಡಬೇಕೆಂದು ಅನೇಕರು ಕೇಳುತ್ತಿದ್ದಾರೆ’ ಎಂದು ಅವರು ಟೀಕೆ ಮಾಡಿದ್ದರು.
ಭಾರತಾಂಬೆ ತಲೆ ತಗ್ಗಿಸುವಂತಾಗಿದೆ ಎಂದಿದ್ದ ಸ್ವಾಮಿ
‘ಮೋದಿ ಸರ್ಕಾರದ 8 ವರ್ಷಗಳ ಅವಧಿಯಲ್ಲಿ, ಭಾರತ ಮಾತೆ ನಾಚಿಕೆಯಿಂದ ತಲೆ ತಗ್ಗಿಸಬೇಕಾಗಿ ಬಂತು. ಏಕೆಂದರೆ ನಾವು ಲಡಾಖ್ನಲ್ಲಿ ಚೀನಿಯರ ಎದುರು ತೆವಳಿ ನಡೆಯಬೇಕಾಯಿತು, ರಷ್ಯನ್ನರ ಮುಂದೆ ಮಂಡಿಯೂರಬೇಕಾಯಿತು, ಕ್ವಾಡ್ ಸಭೆಯಲ್ಲಿ ಅಮೆರಿಕನ್ನರ ಮುಂದೆ ‘ಮಿಯಾಂವ್’ ಎನ್ನಬೇಕಾಯಿತು. ಈಗ ಚಿಕ್ಕ ರಾಷ್ಟ್ರ ಕತಾರ್ ಎದುರು ಸಾಷ್ಟಂಗ ನಮಸ್ಕಾರ ಮಾಡಿದ್ದೇವೆ. ನಮ್ಮ ವಿದೇಶಾಂಗ ನೀತಿಯ ಅಧಃಪತನವಾಗಿದೆ’ ಎಂದು ಅವರು ಟ್ವಿಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.
ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳನ್ನು ಆಗಾಗ್ಗೆ ವಿಮರ್ಶೆ ಮಾಡುತ್ತಿರುತ್ತಾರೆ. ಹಣಕಾಸು, ವಿದೇಶಾಂಗ ವ್ಯವಹಾರ ಮತ್ತು ಗಡಿ ವಿಷಯಗಳು ಅವರ ಟೀಕೆಯ ಪ್ರಮುಖ ವಸ್ತು ವಿಷಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.