ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಸುಖ್ವಿಂದರ್ ಸಿಂಗ್ (ಸುಖ್ಖು) ನೇತೃತ್ವದ ಕಾಂಗ್ರೆಸ್ ಸರ್ಕಾರವು ಭಾನುವಾರ ಸಂಪುಟ ವಿಸ್ತರಣೆ ಮಾಡಿದ್ದು, ಏಳು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ಸೇರಿದಂತೆ ಏಳು ಶಾಸಕರು ಸುಖ್ಖು ಸಂಪುಟ ಸೇರಿದರು.
ಡಾ (ಕರ್ನಲ್) ಧನಿ ರಾಮ್ ಶಾಂಡಿಲ್, ಚಂದರ್ ಕುಮಾರ್, ಹರ್ಷವರ್ಧನ್ ಚೌಹಾಣ್, ಜಗತ್ ಸಿಂಗ್ ನೇಗಿ, ರೋಹಿತ್ ಠಾಕೂರ್, ಅನಿರುದ್ಧ್ ಸಿಂಗ್ ಮತ್ತು ವಿಕ್ರಮಾದಿತ್ಯ ಸಿಂಗ್ ಅವರಿಗೆ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅಧಿಕಾರ ವಿಧಿ ಬೋಧಿಸಿದರು.
ಮೂರು ಬಾರಿಯ ಶಾಸಕ, 82 ವರ್ಷ ವಯಸ್ಸಿನ ಕರ್ನಲ್ ಧನಿ ರಾಮ್ ಶಾಂಡಿಲ್ ಅವರು ಸುಖ್ಖು ಸಂಪುಟದ ಅತ್ಯಂತ ಹಿರಿಯ ಸಚಿವರೆನಿಸಿಕೊಂಡಿದ್ದರೆ, 33 ವರ್ಷದ ವಿಕ್ರಮಾದಿತ್ಯ ಸಿಂಗ್ ಅತ್ಯಂತ ಕಿರಿಯ ಸಚಿವರಾಗಿದ್ದಾರೆ.