ನವದೆಹಲಿ: ಭಾರತೀಯ ಸೇನೆಯಿಂದ ಅಚಾತುರ್ಯವಾಗಿ ಪಾಕಿಸ್ತಾನದಲ್ಲಿ ಕ್ಷಿಪಣಿ ಉಡಾವಣೆ ಆಗಿತ್ತು ಎಂದು ಭಾರತದ ರಕ್ಷಣಾ ಸಚಿವಾಲಯ ಸ್ಪಷ್ಟನೆ ನೀಡಿದೆ. ಅಲ್ಲದೆ ಈ ಘಟನೆ ಬಗ್ಗೆ ರಕ್ಷಣಾ ಇಲಾಖೆ ತೀವ್ರ ವಿಷಾದ ವ್ಯಕ್ತಪಡಿಸಿದೆ.
ಭಾರತ ಕ್ಷಿಪಣಿಯೊಂದನ್ನು ತನ್ನ ದೇಶದತ್ತ ಉಡಾಯಿಸುವ ಮೂಲಕ ವಾಯುಗಡಿ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿ ಪಾಕಿಸ್ತಾನ ಭಾರತದ ರಾಯಭಾರಿಗೆ ಸಮನ್ಸ್ ಜಾರಿ ಮಾಡಿದ ಬೆನ್ನಲ್ಲೇ, ಭಾರತ ಸರ್ಕಾರದ ಈ ಹೇಳಿಕೆ ಹೊರಬಿದ್ದಿದೆ.
ಈ ಸಂಬಂಧ ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿರುವ ರಕ್ಷಣಾ ಇಲಾಖೆ, 'ಸಾಮಾನ್ಯ ನಿರ್ವಹಣೆ ಹಂತದಲ್ಲಿ ಆಗಿರುವ ತಾಂತ್ರಿಕ ದೋಷದಿಂದಾಗಿ ಬುಧವಾರ ಪಾಕಿಸ್ತಾನದ ಭೂ ಪ್ರದೇಶಕ್ಕೆ ಕ್ಷಿಪಣಿ ಚಿಮ್ಮಿದೆ. ಈ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ' ಎಂದು ಹೇಳಿದೆ.
ಪಾಕಿಸ್ತಾನದ ಆತಂಕ:
ಇದಕ್ಕೂ ಮುನ್ನ ಈ ಘಟನೆಗೆ ಸಂಬಂಧಿಸಿದಂತೆ ಗುರುವಾರ ರಾತ್ರಿ ಭಾರತದ ರಾಜತಾಂತ್ರಿಕ ಅಧಿಕಾರಿಯನ್ನು ಕರೆಸಿಕೊಂಡಿದ್ದ ಪಾಕಿಸ್ತಾನ, ಈ ಘಟನೆ ಬಗ್ಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿತ್ತು.ಅಲ್ಲದೆ ಈ ಬಗ್ಗೆ ಪಾರದರ್ಶಕ ಮತ್ತು ವಸ್ತುನಿಷ್ಠ ತನಿಖೆಯಾಗಬೇಕು ಎಂದು ಒತ್ತಾಯಿಸಿತ್ತು.
ಈ ಘಟನೆಯಲ್ಲಿ ಸಾರ್ವಜನಿಕರ ಆಸ್ತಿಗೆ ಹಾನಿಯಾಗಿದೆ. ಅಲ್ಲದೆ ಇಂಥ ಘಟನೆಗಳಿಂದ ಮನುಷ್ಯರಿಗೆ ಅಪಾಯ ಇದ್ದೇ ಇದೆ. ಜತೆಗೆ ಪಾಕಿಸ್ತಾನದ ವಾಯುಗಡಿ ವ್ಯಾಪ್ತಿಯಲ್ಲಿ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳಿಗೂ ಅಪಾಯ ತಪ್ಪಿದ್ದಲ್ಲ. ಇದು ಗಂಭೀರ ಸ್ವರೂಪದ ವಿಮಾನಯಾನ ಅಪಘಾತಕ್ಕೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿತ್ತು.