ನವದೆಹಲಿ: ಭಾರತ –ಚೀನಾ ಗಡಿ ಬಿಕ್ಕಟ್ಟು ಮುಂದುವರಿದ ಬೆನ್ನಲ್ಲೇ ಹೊಸ ಕಮಾಂಡರ್ಗಳು ಮಂಗಳವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಭಾರತೀಯ ಸೇನಾ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಪಾತ್ರವಹಿಸುವ ಉತ್ತರ ಮತ್ತು ಪೂರ್ವ ಕಮಾಂಡರ್ಗಳು ನೆರೆರಾಷ್ಟ್ರ ಚೀನಾದೊಂದಿಗಿನ ಗಡಿ ವಿವಾದವನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.
ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಉತ್ತರ ಸೇನಾಪಡೆ ಕಮಾಂಡರ್ ಆಗಿ ಅಧಿಕಾರ ವಹಿಸಿಕೊಂಡರೆ, ಲೆಫ್ಟಿನೆಂಟ್ ಜನರಲ್ ಆರ್.ಪಿ. ಕಲಿತಾ ಅವರು ಪೂರ್ವ ಸೇನಾಪಡೆ ಕಮಾಂಡರ್ ಆಗಿ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಸೋಮವಾರ ನಿವೃತ್ತರಾದ ಲೆಫ್ಟಿನೆಂಟ್ ಜನರಲ್ ವೈ.ಕೆ. ಜೋಶಿ ಅವರ ಸ್ಥಾನಕ್ಕೆ ದ್ವಿವೇದಿ ನೇಮಕಗೊಂಡರು. ಇತ್ತ ಕಲಿತಾ ಅವರು ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರ ಸ್ಥಾನಕ್ಕೆ ಆಯ್ಕೆಯಾದರು.
ದ್ವಿವೇದಿ ಮತ್ತು ಕಲಿತಾ ಅವರು ಸೇನಾ ಕಮಾಂಡರ್ಗಳಾಗಿ ನೇಮಕಗೊಳ್ಳುವ ಮೊದಲು ಸೇನಾಪಡೆಯ ಪ್ರಧಾನ ಕಛೇರಿಯಲ್ಲಿ ಕಾರ್ಯನಿರ್ವಹಿಸಿದ್ದರು.
ಪೂರ್ವ ಲಡಾಖ್ನಲ್ಲಿ ಭಾರತ ಮತ್ತು ಚೀನಾ ಸೇನೆಯ ನಡುವೆ ಸಂಘರ್ಷ ಆರಂಭವಾಗಿ 21 ತಿಂಗಳು ಕಳೆದಿದೆ.
ಉಭಯ ದೇಶಗಳ ನಡುವೆ ಸೇನಾ ಹಂತದಲ್ಲಿ ಶೀಘ್ರದಲ್ಲಿ 15ನೇ ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಗಾಲ್ವಾನ್ ಕಣಿವೆಯಲ್ಲಿ ಉಂಟಾಗಿದ್ದ ಸಂಘರ್ಷದ ನಂತರ ಎರಡೂ ದೇಶಗಳ ನಡುವೆ ಇದುವರೆಗೆ 14 ಸುತ್ತಿನ ಮಿಲಿಟರಿ ಮಾತುಕತೆಗಳು ನಡೆದಿವೆ. ಆದರೆ, ಈವರೆಗೆ ಇದು ಯಶಸ್ವಿಯಾಗಿಲ್ಲ.
13ನೇ ಸುತ್ತಿನ ಚರ್ಚೆ ಅ.10, 2021ರಂದು ನಡೆದಿತ್ತು. ಉಭಯ ದೇಶಗಳು ತಮ್ಮ ನಿಲುವಿಗೆ ಬದ್ಧರಾಗಿದ್ದು, ಯಥಾಸ್ಥಿತಿ ಮುಂದುವರಿದಿತ್ತು. ನವೆಂಬರ್ 18ರಂದು ವರ್ಚುವಲ್ ಸ್ವರೂಪದಲ್ಲಿ ನಡೆದಿದ್ದ ರಾಜತಾಂತ್ರಿಕ ಹಂತದ ಚರ್ಚೆಯಲ್ಲಿ ಸೇನಾ ಹಂತದಲ್ಲಿ 14ನೇ ಸುತ್ತಿನ ಚರ್ಚೆ ನಡೆಸಲು ನಿರ್ಧರಿಸಲಾಗಿತ್ತು.
ಪಾಂಗಾಂಗ್ ಸರೋವರದ ಬಳಿಕ ಉಭಯ ಸೇನೆಯ ತುಕಡಿಗಳ ನಡುವೆ ಘರ್ಷಣೆ ನಡೆದ ಬಳಿಕ ಮೇ 5, 2020ರಿಂದ ಅನಿಶ್ಚಿತ ಸ್ಥಿತಿ ನಿರ್ಮಾಣವಾಗಿದೆ.