ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಿನ್ ಪಾಯಿಂಟ್ ದಾಳಿ ಮೂಲಕ ಉಗ್ರ ನೆಲೆಗಳನ್ನು ಧ್ವಂಸ ಮಾಡಿದೆ ಎಂದು ಹೇಳಿರುವ ವರದಿಯನ್ನು ಭಾರತೀಯ ಸೇನೆಯು ಗುರುವಾರ ನಿರಾಕರಿಸಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
'ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಗಡಿ ನಿಯಂತ್ರಣ ರೇಖೆಯಾದ್ಯಂತ ಭಾರತೀಯ ಸೇನೆಯು ದಾಳಿ ನಡೆಸಿರುವ ಕುರಿತಾದ ವರದಿಗಳು ನಕಲಿ' ಎಂದು ಲೆಫ್ಟಿನೆಂಟ್ ಜನರಲ್ ಪರಮ್ಜಿತ್ ಸಿಂಗ್ ತಿಳಿಸಿರುವುದಾಗಿ ಸುದ್ದಿಸಂಸ್ಥೆ ಉಲ್ಲೇಖಿಸಿದೆ.
ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಗುರುವಾರ ಯಾವುದೇ ಗುಂಡಿನ ದಾಳಿ ನಡೆದಿಲ್ಲ ಎಂದು ಸೇನೆಯು ಸ್ಪಷ್ಟಪಡಿಸಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್
ಉಗ್ರರನ್ನು ಭಾರತಕ್ಕೆ ನುಸುಳಲು ಬಿಡುವ ಪಾಕಿಸ್ತಾನದ ಪ್ರಯತ್ನಗಳಿಗೆ ಪ್ರತಿಕ್ರಿಯೆಯಾಗಿ ಭಾರತೀಯ ಸೇನೆಯು ಪಿಒಕೆಯಲ್ಲಿ 'ಪಿನ್ ಪಾಯಿಂಟ್ ಸ್ಟ್ರೈಕ್' ನಡೆಸುತ್ತಿದೆ ಎಂದು ಪಿಟಿಐ ಮಾಡಿದ ವರದಿಯ ಬಳಿಕ ಭಾರತೀಯ ಸೇನೆಯು ಈ ಸ್ಪಷ್ಟೀಕರಣವು ಬಂದಿದೆ.
ನಾಗ್ರೋಟಾ ಬಳಿಯ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ನಾಲ್ವರು ಶಂಕಿತ ಉಗ್ರರನ್ನು ಹೊಡೆದುರುಳಿಸಿದ್ದಾರೆ ಎಂದು ವರದಿಯಾಗಿದೆ.
ಶಂಕಿತ ಉಗ್ರರು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು 'ಅಪಾರ ಪ್ರಮಾಣದಲ್ಲಿ' ಸಾಗಿಸುತ್ತಿದ್ದಾರೆ ಮತ್ತು ಮುಂಬರುವ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆ ಮತ್ತು ಪಂಚಾಯತ್ ಉಪಚುನಾವಣೆಯನ್ನು ಅಡ್ಡಿಪಡಿಸಲು ಕಾಶ್ಮೀರಕ್ಕೆ ತೆರಳುತ್ತಿದ್ದರು ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯ ರದ್ದು ಮಾಡಿದ ಬಳಿಕ ಕಳೆದ ವರ್ಷ ಆಗಸ್ಟ್ 5 ರಿಂದೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಮಹತ್ವದ್ದಾಗಿದೆ.
ಪುಲ್ವಾಮಾ ಜಿಲ್ಲೆಯ ಕಾಕಪೋರಾ ಪ್ರದೇಶದಲ್ಲಿ ಭದ್ರತಾ ಪಡೆಗಳನ್ನು ಗುರಿಯಾಗಿಸಲು ಶಂಕಿತ ಉಗ್ರರು ಯತ್ನಿಸಿದ್ದರಿಂದ ಗ್ರೆನೇಡ್ ದಾಳಿಯಲ್ಲಿ ಕನಿಷ್ಠ 12 ನಾಗರಿಕರು ಗಾಯಗೊಂಡಿದ್ದಾರೆ. ಅದಾದ ಕೆಲವೇ ಗಂಟೆಗಳ ನಂತರ ಗುಂಡಿನ ಚಕಮಕಿ ನಡೆದಿದೆ. ಗ್ರೆನೇಡ್ ಉದ್ದೇಶಿತ ಗುರಿಯು ತಪ್ಪಿದೆ ಮತ್ತು ಬೀದಿಯಲ್ಲಿ ಸ್ಫೋಟಗೊಂಡಿದೆ ಎಂದು ವರದಿಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.