ನವದೆಹಲಿ (ಪಿಟಿಐ): ಭಾರತೀಯ ಉದ್ಯಮ ಮತ್ತು ‘ಮೇಕ್ ಇನ್ ಇಂಡಿಯಾ’ ಉಪಕ್ರಮವು ಜಾಗತಿಕ ಬೆಳವಣಿಗೆಗೆ ಭರವಸೆಯ ಕಿರಣವಾಗಿ ಹೊರಹೊಮ್ಮುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು.
ಗಣಪತಿ ಸಚ್ಚಿದಾನಂದ ಸ್ವಾಮಿಗಳ 80ನೇ ಜನ್ಮದಿನಾಚರಣೆ ಕುರಿತು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನೀಡಿದ ಸಂದೇಶದಲ್ಲಿ ಮೋದಿ ಅವರು, ಆಧುನಿಕತೆಯ ಜೊತೆಗೆ ದೇಶವು ತನ್ನ ಪ್ರಾಚೀನತೆಯನ್ನು ಸಂರಕ್ಷಿಸುತ್ತಿದೆ, ಉತ್ತೇಜಿಸುತ್ತಿದೆ ಮತ್ತು ಅದರ ನಾವೀನ್ಯತೆಯನ್ನು ಬಲಪಡಿಸುತ್ತಿದೆ ಎಂದು ಪ್ರತಿಪಾದಿಸಿದರು.
‘ಇಂದು ಭಾರತದ ಗುರುತು ಯೋಗ ಹಾಗೂ ಯುವಕರು. ಜಗತ್ತು ನಮ್ಮ ಸ್ಟಾರ್ಟ್ಅಪ್ಗಳನ್ನು ತನ್ನ ಭವಿಷ್ಯದಂತೆ ನೋಡುತ್ತಿದೆ. ನಮ್ಮ ಉದ್ಯಮ ಮತ್ತು ಮೇಕ್ ಇನ್ ಇಂಡಿಯಾ ಜಾಗತಿಕ ಬೆಳವಣಿಗೆಗೆ ಭರವಸೆಯ ಕಿರಣವಾಗಿ ಹೊರಹೊಮ್ಮುತ್ತಿದೆ’ ಎಂದು ಪ್ರತಿಪಾದಿಸಿದ ಅವರು, ಈ ದಿಶೆಯಲ್ಲಿಯೂ ಆಧ್ಯಾತ್ಮಿಕ ಕೇಂದ್ರಗಳು ಸ್ಫೂರ್ತಿಯ ಕೇಂದ್ರಗಳಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಚ್ಚಿದಾನಂದ ಸ್ವಾಮಿ ಮತ್ತು ಅವರ ಅನುಯಾಯಿಗಳಿಗೆ ಮೋದಿ ನಮನ ಸಲ್ಲಿಸಿದರು. ಸಚ್ಚಿದಾನಂದ ಸ್ವಾಮಿಗಳು ಅವಧೂತ ದತ್ತಪೀಠವನ್ನು ಸ್ಥಾಪಿಸಿದ್ದು, ಇದು ಅಂತರರಾಷ್ಟ್ರೀಯ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಲ್ಯಾಣ ಸಂಸ್ಥೆಯಾಗಿದೆ.