ಬೆಂಗಳೂರು: ಕಾಂಗ್ರೆಸ್ನ ಕುಟುಂಬ ರಾಜಕಾರಣಕ್ಕೆ ಮತ್ತು ಸ್ವಜನ ಪಕ್ಷಪಾತಕ್ಕೆ ಅಡಿಪಾಯ ಹಾಕಿದ್ದೇ ಇಂದಿರಾ ಗಾಂಧಿ ಎಂದು ‘ಆ ದಿನಗಳು’ ಖ್ಯಾತಿಯನಟ ಚೇತನ್ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಕುರಿತು ನಿರಂತರವಾಗಿ ಅಭಿಪ್ರಾಯ ಹಂಚಿಕೊಳ್ಳುತ್ತಿರುವ ಚೇತನ್, ಅದರಲ್ಲಿ ಟೀಕೆ, ವಿಮರ್ಶೆಗಳನ್ನೂ ಮಾಡುತ್ತಿದ್ದಾರೆ. ಈಗ ಕುಟುಂಬ ರಾಜಕಾರಣದ ವಿಚಾರವನ್ನಿಟ್ಟುಕೊಂಡು, ದಿವಂಗತ ಇಂದಿರಾಗಾಂಧಿ ಅವರ ಬಗ್ಗೆ ಮಾತನಾಡಿದ್ದಾರೆ.
‘1959 ರಲ್ಲಿ ಜವಾಹರಲಾಲ್ ನೆಹರೂ ಅವರು ಪ್ರಧಾನ ಮಂತ್ರಿಯಾಗಿದ್ದಾಗ ಅವರ ಮಗಳು ಇಂದಿರಾ ಗಾಂಧಿಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದರು. ವಂಶ ರಾಜಕಾರಣಿಯಾದ ಇಂದಿರಾ ಮುಂದೆ ಪ್ರಶ್ನಾರ್ಹ ಪ್ರಧಾನಿಯೂ ಆಗುತ್ತಾರೆ. ಆ ಮೂಲಕ ಕಾಂಗ್ರೆಸ್ನ ಕುಟುಂಬ ರಾಜಕೀಯ ಮತ್ತು ಸ್ವಜನ ಪಕ್ಷಪಾತಕ್ಕೆ ಅವರು ಅಡಿಪಾಯ ಹಾಕುತ್ತಾರೆ,’ ಎಂದು ಚೇತನ್ ಅಭಿಪ್ರಾಯಪಟ್ಟಿದ್ದಾರೆ.
‘ಕೇವಲ ಕೆಲವು ಗಣ್ಯ ವ್ಯಕ್ತಿಗಳಿಗಷ್ಟೇ ಅಲ್ಲದೇ, ನಮ್ಮೆಲ್ಲರಿಗೂ ನಮ್ಮ ದೇಶವನ್ನು ಕಟ್ಟುವ ಅವಕಾಶ ಸಿಗಬೇಕು,’ ಎಂದೂ ಅವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.