ನವದೆಹಲಿ: ‘ಕೆನ್ ಮತ್ತು ಬೆಟ್ವಾ ನದಿಗಳ ಜೋಡಣೆಯಿಂದ ಮಧ್ಯಪ್ರದೇಶದ ಪನ್ನಾ ಹುಲಿ ಮೀಸಲು ಅರಣ್ಯ ಪ್ರದೇಶ ನಾಶವಾಗಲಿದೆ ಎಂದು ಕೇಂದ್ರ ಪರಿಸರ ಖಾತೆಯ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಇದಕ್ಕೆ ಸಂಬಂಧಿಸಿದಂತೆ ಹತ್ತು ವರ್ಷಗಳ ಹಿಂದೆ ನಾನು ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದೆ. ಆದರೆ, ಅವುಗಳನ್ನು ಕಡೆಗಣಿಸಲಾಗಿದೆ' ಎಂದು ಉಲ್ಲೇಖಿಸಿದ್ದಾರೆ.
'ಈ ನದಿ ಜೋಡಣೆ ಪನ್ನಾ ಹುಲಿ ಸಂರಕ್ಷಿತ ಪ್ರದೇಶವನ್ನು ನಾಶ ಮಾಡಲಿದೆ. ಅಷ್ಟೇ ಅಲ್ಲ ‘ಹುಲಿ ಸಂರಕ್ಷಿತ ಪ್ರದೇಶದ ನಿರ್ಮಾಣ ಮತ್ತು ಪುನರುಜ್ಜೀವನ ಕಾರ್ಯದಂತಹ ಯಶೋಗಾಥೆಯನ್ನು ನಾಶಪಡಿಸುತ್ತದೆ ' ಎಂದು ಜೈರಾಮ್ ರಮೇಶ್ ಉಲ್ಲೇಖಿಸಿದ್ದಾರೆ.
ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿಗಳು ಸೋಮವಾರ (ಇಂದು) ವಿಶ್ವ ಜಲದಿನಾಚರಣೆಯ ಅಂಗವಾಗಿ ನಡೆಯಲಿರುವ ‘ಜಲಶಕ್ತಿ ಅಭಿಯಾನ್; ಕ್ಯಾಚ್ ದಿ ರೈನ್‘ ಆಂದೋಲನ ಉದ್ಘಾಟನೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಈ ನದಿ ಜೋಡಣೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.
The CMs of UP and MP will sign a pact today to link the Ken and Betwa rivers. This will all but destroy the Panna Tiger Reserve in MP, a success story in translocation and revival. I had suggested alternatives 10 years ago but alas...