ಜಮ್ಶೆಡ್ಪುರ (ಜಾರ್ಖಂಡ್): ಮಹಿಳೆಯೊಬ್ಬರು ತನ್ನ ಪತಿಯನ್ನು ಕೊಲೆ ಮಾಡಿ, ಮನೆಯಲ್ಲಿಯೇ ಬೆಂಕಿ ಹಚ್ಚಿ ಸುಟ್ಟು ಹಾಕಲು ಯತ್ನಿಸಿರುವ ಪ್ರಕರಣ ಜಮ್ಶೆಡ್ಪುರದ ಸುಭಾಷ್ ಕಾಲೋನಿಯಲ್ಲಿ ವರದಿಯಾಗಿದೆ. ಗುರುವಾರ ರಾತ್ರಿ ಈ ಘಟನೆ ನಡೆದಿದೆ.
ಆರೋಪಿ ಮಹಿಳೆಯು ಮನೆಯ ಒಳಗಿನಿಂದ ಬಾಗಿಲು ಹಾಕಿಕೊಂಡು, ಯಾರೊಬ್ಬರೂ ಪ್ರವೇಶಿಸದಂತೆ ತಡೆಯಲು ಬಾಗಿಲಿಗೆ ವಿದ್ಯುತ್ ಸಂಪರ್ಕ ನೀಡಿದ್ದಾಳೆ.
ಕೊಲೆಯಾದ ವ್ಯಕ್ತಿಯನ್ನು ಅಮರನಾಥ್ ಸಿಂಗ್ ಎಂದು ಗುರುತಿಸಲಾಗಿದ್ದು, ಟ್ರಾನ್ಸ್ಪೋರ್ಟ್ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಕೊಂಡಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ವಿದ್ಯಾಭ್ಯಾಸದ ಕಾರಣದಿಂದ ಬೇರೆ ನಗರಗಳಲ್ಲಿ ಇದ್ದರು.
ಬಾಗಿಲಿಗೆ ವಿದ್ಯುತ್ ಪ್ರವಹಿಸುವಂತೆ ಮಾಡಿದ್ದ ಸಂಪರ್ಕ ಕಡಿತಗೊಳಿಸಿ, ಬಳಿಕ ಮನೆಯೊಳಗೆ ಹೋದ ಪೊಲೀಸರು, ಅರ್ಧದಷ್ಟು ಸುಟ್ಟುಹೋಗಿದ್ದ ಶವವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಮಹಿಳೆ ಮೀರಾ ಸಿಂಗ್ ಎಂಬಾಕೆಯನ್ನು ಬಂಧಿಸಿದ್ದಾರೆ.
ಮೀರಾ, ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದರು. ದಂಪತಿ ನಿರಂತರವಾಗಿ ಜಗಳವಾಡುತ್ತಿದ್ದರು ಎಂದು ನೆರೆ–ಹೊರೆಯವರು ಹೇಳಿಕೆ ನೀಡಿದ್ದಾರೆ.
ಮನೆಯಿಂದ ಸುಟ್ಟ ವಾಸನೆ ಬರಲಾರಂಭಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಅಕ್ಕ–ಪಕ್ಕದ ಮನೆಯವರು ಪುಣೆಯಲ್ಲಿರುವ ದಂಪತಿಯ ಮಗನಿಗೆ ತಕ್ಷಣವೇ ವಿಷಯ ತಿಳಿಸಿದ್ದಾರೆ.
ಛಾವಣೆ ಮೇಲೆರಿದ್ದ ಮಹಿಳೆ ದೊಣ್ಣೆ ಹಿಡಿದು, ಜನರು ಹತ್ತಿರಕ್ಕೆ ಬರದಂತೆ ಬೆದರಿಸಿದ್ದಾಳೆ. ಅಷ್ಟರಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ನೆರೆ–ಹೊರೆಯವರ ಮಾಹಿತಿ ಪ್ರಕಾರ, ಮೃತ ವ್ಯಕ್ತಿಯು ಕಳೆದ ನಾಲ್ಕೈದು ದಿನಗಳಿಂದ ಮನೆಯಿಂದ ಹೊರಗೆ ಬಂದಿರಲಿಲ್ಲ ಎನ್ನಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.