ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಕೊರೊನಾವೈರಸ್ ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕೆ ಅವರು ಕೈಗೊಂಡ ಕ್ರಮಗಳು ಬಿಹಾರದಲ್ಲಿ ಎನ್ಡಿಎ ಗೆಲುವಿಗೆ ಕಾರಣ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಹೇಳಿದ್ದಾರೆ.
ಬಿಹಾರದ ಜನರು ಕ್ರೌರ್ಯ ಮತ್ತು ಅರಾಜಕತೆಯನ್ನು ಬದಿಗೆ ತಳ್ಳಿ ವಿಕಾಸ್ ರಾಜ್ (ಅಭಿವೃದ್ಧಿಯ ಆಡಳಿತ) ಆಯ್ಕೆ ಮಾಡಿಕೊಂಡಿದ್ದಾರೆ.
ಬಿಹಾರ ವಿಧಾನಸಭೆ ಹಾಗೂ ವಿವಿಧ ರಾಜ್ಯಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದಕ್ಕಾಗಿ ಜನರಿಗೆ ಧನ್ಯವಾದಗಳನ್ನು ಸಲ್ಲಿಸಿದ ನಡ್ಡಾ, ಕೋವಿಡ್ ಸಾಂಕ್ರಾಮಿಕದ ನಡುವೆ ನಡೆದ ಅತಿದೊಡ್ಡ ಚುನಾವಣೆ ಇದಾಗಿದೆ ಎಂದಿದ್ದಾರೆ.
ಕೊರೊನಾವೈರಸ್ ಸಾಂಕ್ರಾಮಿಕವನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಪ್ರಶ್ನೆ ಎದ್ದಾಗ ನರೇಂದ್ರ ಮೋದಿ ಅವರು ಸರಿಯಾದ ಸಮಯದಲ್ಲಿ ಲಾಕ್ಡೌನ್ ಘೋಷಣೆ ಮಾಡುವ ಮೂಲಕ ಹಲವಾರು ಜನರ ಪ್ರಾಣ ಉಳಿಸಿದ್ದಾರೆ ಎಂದು ನಡ್ಡಾ ಹೇಳಿದ್ದಾರೆ.