ಸಿಸ್ಟರ್ ಅಭಯಾ ಪ್ರಕರಣ: ಅಪರಾಧಿಗಳಿಗೆ ಪೆರೋಲ್ ನೀಡಿದ್ದಕ್ಕೆ ಹೈಕೋರ್ಟ್ ಗರಂ

ತಿರುವನಂತಪುರಂ: ಕೇರಳದ ಸಿಸ್ಟರ್ ಅಭಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಿಗೆ ನೀಡಿರುವ ಪೆರೋಲ್ ರದ್ದುಗೊಳಿಸಬೇಕೆಂದು ಸಲ್ಲಿಕೆಯಾಗಿರುವ ಅರ್ಜಿಯನ್ನು ಕೇರಳ ಹೈಕೋರ್ಟ್ ಸೋಮವಾರ ವಿಚಾರಣೆ ನಡೆಸಿತು.
ಇದಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರದ ಪ್ರತಿಕ್ರಿಯೆ ಕೇಳಿರುವ ಉನ್ನತ ನ್ಯಾಯಾಲಯ, ಕೇರಳ ಕಾರಾಗೃಹ ಇಲಾಖೆಯ ಡಿಜಿ ಮತ್ತು ಅಪರಾಧಿಗಳಾದ ಪಾದರ್ ಥಾಮಸ್ ಕೊಟ್ಟೂರು ಹಾಗೂ ಸಿಸ್ಟರ್ ಸೆಫಿ ಅವರಿಗೆ ನೋಟಿಸ್ ನೀಡಿದೆ.
ನ್ಯಾಯಮೂರ್ತಿಗಳಾದ ಕೆ.ವಿನೋದ್ ಚಂದ್ರನ್, ಜಿಯಾದ್ ರೆಹಮಾನ್ ಎಎ ಅವರನ್ನೊಳಗೊಂಡ ನ್ಯಾಯಪೀಠ ಅರ್ಜಿಯ ವಿಚಾರಣೆ ನಡೆಸುತ್ತಿದೆ. ಮಾನವ ಹಕ್ಕುಗಳ ಕಾರ್ಯಕರ್ತ ಹಾಗೂ ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ಜೋಮನ್ ಪುಥೇನ್ ಪುರಕಲ್ ಅವರು ಅಪರಾಧಿಗಳಿಗೆ ನೀಡಿರುವ ಪೆರೋಲ್ ರದ್ದು ಮಾಡಬೇಕು ಎಂದು ಹೈಕೋರ್ಟಗೆ ಅರ್ಜಿ ಸಲ್ಲಿಸಿದ್ದರು.
ಕೊರೊನಾ ಹಿನ್ನೆಲೆಯಲ್ಲಿ ಥಾಮಸ್ ಹಾಗೂ ಸೆಫಿ ಅವರಿಗೆ ಕಳೆದ ಮೇ 11 ರಂದು ಕೇರಳ ಕಾರಾಗೃಹ ಡಿಜಿ ಅವರು, 90 ದಿನದ ಪೆರೋಲ್ ನೀಡಿದ್ದರು. ಆದರೆ, ಜೂನ್ 28 ರಂದು ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಡಿಜಿ, ಇದು ರಾಜ್ಯ ಸರ್ಕಾರ ಕೈಗೊಂಡ ತೀರ್ಮಾನ ಎಂದು ಹೇಳಿದ್ದರು.
1992 ಮಾರ್ಚ್ 27 ರಂದು ಕೇರಳದ ಕೊಟ್ಟಾಯಂನ ಸೇಂಟ್ ಪಿಯೂಷ್ ವಸತಿ ಶಾಲೆಯ ಬಾವಿಯಲ್ಲಿ 21 ವರ್ಷದ ಸಿಸ್ಟರ್ ಅಭಯಾ ಮೃತ ದೇಹ ಪತ್ತೆಯಾಗಿತ್ತು. ತನಿಖೆ ನಡೆಸಿದ್ದ ಸಿಬಿಐ, ಪಾದರ್ ಥಾಮಸ್ ಹಾಗೂ ಸಿಸ್ಟರ್ ಸೆಫಿ ಅಕ್ರಮ ಸಂಬಂಧವನ್ನು ಕಂಡಿದ್ದಕ್ಕೆ ಅಭಯಾ ಕೊಲೆ ಮಾಡಿ ಬಾವಿಯಲ್ಲಿ ಬಿಸಾಕಿದ್ದರು ಎಂಬ ಆರೋಪ ಸಾಬೀತಾಗಿತ್ತು. 2020 ರ ಡಿಸೆಂಬರನಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಈ ಇಬ್ಬರಿಗೂ ಜೀವಾವಧಿ ಶಿಕ್ಷೆಯನ್ನು ನೀಡಿತ್ತು.
ಇದನ್ನೂ ಓದಿ: ಸಿಎಂಗೆ ಕುರ್ಚಿ ಚಿಂತೆ, ಮಗನಿಗೆ ದುಡ್ಡಿನ ಚಿಂತೆ: ಸಿದ್ದರಾಮಯ್ಯ ವ್ಯಂಗ್ಯ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.