ನವದೆಹಲಿ: ನಾಲ್ವರು ರೈತರ ಸಾವಿಗೆ ಕಾರಣವಾದ ಲಖಿಂಪುರ-ಖೇರಿ ಹಿಂಸಾಚಾರದ ಕುರಿತು ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ಇಂದು (ಅಕ್ಟೋಬರ್ 8) ಸಭೆ ನಡೆಸಲಿರುವುದಾಗಿ ರೈತ ಸಂಘಟನೆಯಾದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಗುರುವಾರ ಹೇಳಿದೆ.
ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯನ್ನು ಮುನ್ನಡೆಸುತ್ತಿರುವ ಎಸ್ಕೆಎಂ, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮೆಹ್ರಾ ಬಂಧನಕ್ಕಾಗಿ ಕಾಯುತ್ತಿದೆ ಎಂದು ಹೇಳಿದೆ.
ಲಖಿಂಪುರ-ಖೇರಿ ಜಿಲ್ಲೆಯಲ್ಲಿ ಅಕ್ಟೋಬರ್ 3 ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಗುರುವಾರ ಇಬ್ಬರನ್ನು ಬಂಧಿಸಿದ್ದಾರೆ. ಆಶಿಶ್ ಮೆಹ್ರಾ ಅವರು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಪೊಲೀಸ್ ಠಾಣೆಗೆ ಬರುವಂತೆ ನೋಟಿಸ್ನಲ್ಲಿ ಸೂಚಿಸಲಾಗಿದೆ.
'ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಬೇಕು ಮತ್ತು ಘಟನೆಯಲ್ಲಿ ಮೃತಪಟ್ಟ ರೈತರ ಶ್ರದ್ಧಾಂಜಲಿ ಸಭೆಗೂ ಮುನ್ನವೇ ಅವರ ಮಗನ ಬಂಧನದ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ 'ದೊಡ್ಡ ಹೋರಾಟ'ವನ್ನು ಆರಂಭಿಸಲಾಗುವುದು' ಎಂದು ಎಸ್ಕೆಎಂ ಉತ್ತರ ಪ್ರದೇಶದ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಎಸ್ಕೆಎಂ ಗುರುವಾರ ತನ್ನ ಹೇಳಿಕೆಯಲ್ಲಿ, ಮೃತ ರೈತರ 'ಶ್ರದ್ಧಾಂಜಲಿ' ಅಕ್ಟೋಬರ್ 12 ರಂದು ನಡೆಯಲಿದೆ. ಆಶಿಶ್ ಮಿಶ್ರಾ ಮತ್ತು ಆತನ ಸಹಚರರ ಬಂಧನಕ್ಕಾಗಿ ಇನ್ನೂ ಕಾಯುತ್ತಿದೆ ಎಂದು ಅದು ಹೇಳಿದೆ.
ಲಖಿಂಪುರ-ಖೇರಿಯಲ್ಲಿ ನಡೆದ ಘಟನೆಯು 'ಅಪಘಾತ' ಎಂಬ ಉತ್ತರ ಪ್ರದೇಶದ ಸಚಿವ ಬಲದೇವ್ ಸಿಂಗ್ ಔಲಖ್ ಅವರ ಹೇಳಿಕೆಯನ್ನು ರೈತರ ಗುಂಪು ಖಂಡಿಸಿತು ಮತ್ತು ಅವರು ಅದನ್ನು ಹಿಂಪಡೆಯುವಂತೆ ಒತ್ತಾಯಿಸಿದರು.