ಶ್ರೀನಗರ: ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭಾನುವಾರ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಲಷ್ಕರ್–ಎ–ತಯಬಾ (ಎಲ್ಇಟಿ) ಉಗ್ರ ಸಂಘಟನೆಗೆ ಸೇರಿದ ಇರ್ಷಾದ್ ಭಟ್ ಎಂಬ ಭಯೋತ್ಪಾಕನನ್ನು ಹೊಡೆದುರುಳಿಸಿವೆ.
‘ಇದಕ್ಕೂ ಮುನ್ನ, ಉಗ್ರನಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡಭದ್ರತಾ ಪಡೆಗಳು ಶನಿವಾರ ಸಂಜೆಯಿಂದ ಬಾರಾಮುಲ್ಲಾದ ಬಿನ್ನೆರ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದವು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
‘ಈ ವೇಳೆ ಇರ್ಷಾದ್ ಪಡೆಗಳ ಮೇಲೆ ಗುಂಡು ಹಾರಿಸಿದ್ದರಿಂದ, ಶೋಧ ಕಾರ್ಯಾಚರಣೆಯು ಎನ್ಕೌಂಟರ್ಗೆ ತಿರುಗಿತು. ಈ ವರ್ಷದ ಮೇ ತಿಂಗಳಲ್ಲಿ ಇರ್ಷಾದ್ ಎಲ್ಇಟಿಗೆ ಸೇರಿದ್ದ’ ಎಂದೂ ಅವರು ತಿಳಿಸಿದರು.
‘ಹತ್ಯೆಯಾದ ಭಯೋತ್ಪಾದಕನಿಂದ 1 ಎಕೆ ರೈಫಲ್, 2 ಮ್ಯಾಗಜಿನ್ಗಳು, 30 ಸುತ್ತು ಜೀವಂತ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಕಾಶ್ಮೀರದ ಪೊಲೀಸರು ಟ್ವೀಟ್ ಮಾಡಿದ್ದಾರೆ.