ಮುಂಬೈ: ಮಸೀದಿಗಳಿಂದ ಯಾರಾದರೂ ಬಲವಂತವಾಗಿ ಧ್ವನಿವರ್ಧಕಗಳನ್ನು ತೆರವುಗೊಳಿಸಲು ಪ್ರಯತ್ನಿಸಿದರೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್ಪಿಐ) ಪಕ್ಷದ ಕಾರ್ಯಕರ್ತರು ರಕ್ಷಿಸುತ್ತಾರೆ ಎಂದು ಕೇಂದ್ರ ಸಚಿವ, ಆರ್ಪಿಐ ಪಕ್ಷದ ನಾಯಕ ರಾಮದಾಸ್ ಅಠವಳೆ ಮಂಗಳವಾರ ಹೇಳಿದ್ದಾರೆ.
ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾಗುವುದಿಲ್ಲ ಎಂದು ತಮ್ಮ ಪಕ್ಷವು ಭರವಸೆ ನೀಡುತ್ತದೆ ಎಂದೂ ಅವರು ಹೇಳಿದರು.
‘ಮಸೀದಿಯ ಹೊರಗೆ ಹನುಮಾನ್ ಚಾಲೀಸಾ ಮಂತ್ರ ಪಠಿಸಲು ನಮ್ಮ ವಿರೋಧವಿಲ್ಲ. ಆದರೆ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆರವುಗೊಳಿಸಲು ಮಹಾರಾಷ್ಟ್ರ ನಿರ್ಮಾಣ ಸೇನೆಯು ಇಟ್ಟಿರುವ ಬೇಡಿಕೆಗೆ ನಮ್ಮ ವಿರೋಧವಿದೆ. ಯಾರಾದರೂ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆರವುಗೊಳಿಸಲು ಪ್ರಯತ್ನಿಸಿದರೆ ಅದನ್ನು ಆರ್ಪಿಐ ಕಾರ್ಯಕರ್ತರು ರಕ್ಷಿಸುತ್ತಾರೆ’ ಎಂದು ಅಠವಳೆ ಸುದ್ದಿಗಾರರಿಗೆ ತಿಳಿಸಿದರು.
‘ಧ್ವನಿವರ್ಧಕಗಳ ಧ್ವನಿ ಕಡಿಮೆ ಮಾಡಲು ನಿರ್ದೇಶನ ನೀಡಿರಬಹುದು. ಬಿಜೆಪಿ ಇದನ್ನು ಬೆಂಬಲಿಸಿರಬಹುದು. ಆದರೆ ತಮ್ಮ ಪಕ್ಷವು ಇಂತಹ ನಡೆಯ ಪರ ಇಲ್ಲ’ ಎಂದು ಅಠವಳೆ ಅವರು ಹೇಳಿದರು.