ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ಲಜನಕ ದಾಸ್ತಾನು ಕೊರತೆ; ಖಾಸಗಿ ಆಸ್ಪತ್ರೆಯ ಐವರು ಕೋವಿಡ್ ರೋಗಿಗಳು ಸಾವು

Last Updated 23 ಏಪ್ರಿಲ್ 2021, 11:40 IST
ಅಕ್ಷರ ಗಾತ್ರ

ಜಬಲ್ಪುರ: ಮಧ್ಯಪ್ರದೇಶದ ಜಬಲ್ಪುರ ನಗರದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಐವರು ಕೋವಿಡ್ ರೋಗಿಗಳು ವೈದ್ಯಕೀಯ ಆಮ್ಲಜನಕದ ದಾಸ್ತಾನು ಮುಗಿದ್ದರಿಂದಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಗ್ಯಾಲಕ್ಸಿ ಆಸ್ಪತ್ರೆಯಲ್ಲಿ ಗುರುವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ (ಕೊಟ್ವಾಲಿ ಪ್ರದೇಶ) ದೀಪಕ್ ಮಿಶ್ರಾ ತಿಳಿಸಿದ್ದಾರೆ.

'ಆಸ್ಪತ್ರೆಯ ಐಸಿಯುನಲ್ಲಿದ್ದ ಐವರು ಕೋವಿಡ್-19 ರೋಗಿಗಳು ಮೃತಪಟ್ಟಿದ್ದಾರೆ, ಮೃತರ ಕುಟುಂಬ ಸದಸ್ಯರ ಪ್ರಕಾರ, ವೈದ್ಯಕೀಯ ಆಮ್ಲಜನಕದ ಸಂಗ್ರಹವು ಖಾಲಿಯಾಗಿದ್ದರಿಂದಾಗಿ ಮೃತಪಟ್ಟಿದ್ದಾರೆ' ಎಂದು ಅವರು ಹೇಳಿದರು.

ಆಸ್ಪತ್ರೆಯ ಹೊರಗೆ ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಬಳಿಕ ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

'ಆಮ್ಲಜನಕದ ದಾಸ್ತಾನು ಖಾಲಿಯಾಗಿ ಆಮ್ಲಜನಕದ ಪೂರೈಕೆಯ ಕೊರತೆಯಿಂದಾಗಿ ತಮ್ಮ ಪ್ರೀತಿಪಾತ್ರರು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಾರೆ. ಗುರುವಾರ ತಡರಾತ್ರಿ 10 ಆಮ್ಲಜನಕ ಸಿಲಿಂಡರ್‌ಗಳ ಪೂರೈಕೆಗಾಗಿ ಆಸ್ಪತ್ರೆ ಕಾಯುತ್ತಿತ್ತು, ಆದರೆ ಅವುಗಳನ್ನು ಸಾಗಿಸುವ ವಾಹನವು ಕೆಟ್ಟು ನಿಂತಿದೆ. ನಂತರ, ಪೊಲೀಸ್ ತಂಡವನ್ನೇ ಆಮ್ಲಜನಕದ ಸಿಲಿಂಡರ್ ಸಂಗ್ರಹಿಸಲು ಖಾಸಗಿ ಏಜೆನ್ಸಿಗೆ ಕರೆದೊಯ್ಯಲಾಯಿತು' ಎಂದು ಸಿಎಸ್‌ಪಿ ಹೇಳಿದ್ದಾರೆ.

'ಬಳಿಕ ಬದಲಿ ವಾಹನವನ್ನು ವ್ಯವಸ್ಥೆ ಮಾಡಲಾಗಿದೆ ಮತ್ತು 10 ವೈದ್ಯಕೀಯ ಆಮ್ಲಜನಕ ಸಿಲಿಂಡರ್‌ಗಳನ್ನು ಆಸ್ಪತ್ರೆಗೆ ತರಲಾಗಿದೆ' ಎಂದು ಅವರು ಹೇಳಿದರು.

ಈ ಬಗ್ಗೆ ತನಿಖೆ ನಡೆಸಬೇಕೆಂದು ಕುಟುಂಬ ಸದಸ್ಯರು ಪೊಲೀಸರನ್ನು ಒತ್ತಾಯಿಸಿದ್ದಾರೆ. 'ತನಿಖೆ ಪ್ರಾರಂಭಿಸಲು ಲಿಖಿತ ದೂರಿಗಾಗಿ ನಾವು ಕಾಯುತ್ತಿದ್ದೇವೆ' ಎಂದು ಮಿಶ್ರಾ ಹೇಳಿದ್ದಾರೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ (ಪಟಾನ್) ಮತ್ತು ಮಾಜಿ ಆರೋಗ್ಯ ಸಚಿವ ಅಜಯ್ ವೈಷ್ಣೋಯ್, 'ಆಮ್ಲಜನಕದ ಪೂರೈಕೆಯ ಬಗ್ಗೆ ಖಾಸಗಿ ಆಸ್ಪತ್ರೆಯ ಕಳಪೆ ನಿರ್ವಹಣೆಯೇ ಘಟನೆಗೆ ಕಾರಣ. ಅಗತ್ಯವನ್ನು ಪರಿಗಣಿಸಿ ಆಸ್ಪತ್ರೆಯು ಮುಂಚಿತವಾಗಿ ವೈದ್ಯಕೀಯ ಆಮ್ಲಜನಕ ಪೂರೈಸುವ ವ್ಯವಸ್ಥೆಯನ್ನು ಮಾಡಬೇಕಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಜಬಲ್ಪುರ್ ಜಿಲ್ಲೆಯಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆಯಿಲ್ಲ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT