ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ| ಮಹಿಳೆ ಕುರಿತ ಅವಹೇಳನಕಾರಿ ಮಾತು: ಈಗ ಬಿಜೆಪಿ ಸಚಿವನ ಸರದಿ

Last Updated 20 ಅಕ್ಟೋಬರ್ 2020, 1:57 IST
ಅಕ್ಷರ ಗಾತ್ರ

ಅನುಪುರ: ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲನಾಥ್‌ ಅವರು ಮಾಜಿ ಸಚಿವೆ ಇಮರತಿ ದೇವಿ ಅವರ ವಿರುದ್ಧ ಕೀಳು ಪದ ಬಳಸಿರುವ ವಿವಾದ ತಣ್ಣಗಾಗುವ ಮೊದಲೇ ಬಿಜೆಪಿ ಸಚಿವ ಕಾಂಗ್ರೆಸ್‌ ಅಭ್ಯರ್ಥಿಯ ಪತ್ನಿಯ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಸಚಿವ ಬಿಸಾಹುಲಾಲ್ ಸಿಂಗ್ ಅವರು ಕಾಂಗ್ರೆಸ್ ಅಭ್ಯರ್ಥಿ ವಿಶ್ವನಾಥ್ ಸಿಂಗ್ ಕುಂಜಮ್ ಅವರ ಪತ್ನಿಯನ್ನು (ರಖೇಲ್‌) ‘ಪ್ರೇಯಸಿ’ ಎಂದು ಹೇಳಿರುವುದು ಸೋಮವಾರ ವೈರಲ್ ಆದ ವಿಡಿಯೋವೊಂದರಲ್ಲಿ ಬಹಿರಂಗವಾಗಿದೆ.

ವಿಶ್ವನಾಥ್‌ ಸಿಂಗ್‌ ಕುಂಜಮ್‌ ಅವರು ಅನುಪುರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ.

‘ವಿಶ್ವನಾಥ್ ಸಿಂಗ್ ತನ್ನ ಮೊದಲ ಪತ್ನಿಯ ಮಾಹಿತಿಯನ್ನು ಏಕೆ ಮರೆಮಾಚುತ್ತಿದ್ದಾರೆ. ನಾಮಪತ್ರದಲ್ಲಿ ತಮ್ಮ ಪ್ರೇಯಸಿಯನ್ನು ಯಾಕೆ ಉಲ್ಲೇಖಿಸಿದ್ದಾರೆ. ಅವರು ತಮ್ಮ ಮೊದಲ ಪತ್ನಿಯ ಮಾಹಿತಿ ನೀಡದೇ, ಪ್ರೇಯಸಿಯ ಮಾಹಿತಿ ಕೊಟ್ಟಿದ್ದಾರೆ,’ ಎಂದು ಹೇಳಿರುವುದು ವಿಡಿಯೊದಲ್ಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಅಭ್ಯರ್ಥಿ ವಿಶ್ವನಾಥ್‌ ಸಿಂಗ್‌, ಬಿಸಾಹುಲಾಲ್‌ ಸಿಂಗ್‌ ಅವರ ಆರೋಪ ನಿರಾಧಾರ ಎಂದಿದ್ದಾರೆ.
‘ನಾನು 15 ವರ್ಷಗಳ ಹಿಂದೆ ಮದುವೆಯಾಗಿದ್ದೇನೆ. ನನಗೆ 14 ವರ್ಷದ ಮಗಳಿದ್ದಾಳೆ. ಬಿಸಾಹುಲಾಲ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಅವರ ಹೇಳಿಕೆಯು ಅವರ ವ್ಯಕ್ತಿತ್ವವನ್ನು ಬಯಲು ಮಾಡಿದೆ. ಒಂದು ಕಡೆ ಅವರು ಉಪವಾಸ ಧರಣಿಯ ನಾಟಕವಾಡುತ್ತಾರೆ. ಮತ್ತೊಂದೆಡೆ, ಮಹಿಳೆಯರಿಗೆ ಅಗೌರವ ತೋರುತ್ತಾರೆ,’ಎಂದು ಟೀಕಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಲು ಸಚಿವ ಬಿಸಾಹುಲಾಲ್‌ ಅವರು ಲಭ್ಯರಾಗಿಲ್ಲ. ಅವರು ಪ್ರಚಾರ ಕಾರ್ಯದಲ್ಲಿ ತೊಡಗಿರುವುದರಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಬಿಜೆಪಿ ವಕ್ತಾರ ರಜನೀಶ್‌ ಅಗರ್‌ವಾಲ್‌ ಹೇಳಿದ್ದಾರೆ.

ಇದಕ್ಕೂ ಮೊದಲು ಕಾಂಗ್ರೆಸ್‌ನ ಹಿರಿಯ ನಾಯಕ ಕಮಲನಾಥ್‌ ಅವರು ಬಿಜೆಪಿ ಮಹಿಳಾ ಅಭ್ಯರ್ಥಿ, ಮಾಜಿ ಸಚಿವೆ ಇಮರತಿ ದೇವಿ ಅವರನ್ನು ‘ಐಟಂ’ ಎಂದು ಕರೆದಿದ್ದರು. ಈ ಬಗ್ಗೆ ಬಿಜೆಪಿ ಪ್ರತಿಭಟನೆಯನ್ನೂ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT