ಉಜ್ಜಯನಿ: ‘ಜಾರ್ಖಂಡ್ನ ವ್ಯಕ್ತಿಯೊಬ್ಬರು ತಮ್ಮ ಪತ್ನಿಯ ಕೊನೆಯ ಆಸೆಯಂತೆ ಮಧ್ಯಪ್ರದೇಶದ ಉಜ್ಜಯನಿ ಜಿಲ್ಲೆಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ₹ 17 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದಾನ ನೀಡಿದ್ದಾರೆ’ ಎಂದು ದೇವಸ್ಥಾನದ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
‘ಕೆಲ ಕಾಲದ ಹಿಂದೆ ಮೃತರಾಗಿರುವ ರಶ್ಮಿಪ್ರಭಾ ಅವರು ಮಹಾಕಾಳೇಶ್ವರ ದೇವರ ಭಕ್ತೆಯಾಗಿದ್ದರು. ಅವರು ನಿಯಮಿತವಾಗಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸಾಯುವ ಮುನ್ನ ತಮ್ಮ ಚಿನ್ನದ ಒಡವೆಗಳನ್ನು ದೇವರಿಗೆ ನೀಡಬೇಕೆಂಬ ಆಸೆ ವ್ಯಕ್ತಪಡಿಸಿದ್ದರು’ ಎಂದು ದೇವಸ್ಥಾನದ ಆಡಳಿತಾಧಿಕಾರಿ ಗಣೇಶ್ ಕುಮಾರ್ ಧಕಡ್ ತಿಳಿಸಿದ್ದಾರೆ.
ರಶ್ಮಿಪ್ರಭಾ ಅವರ ಪತಿ,ಜಾರ್ಖಂಡ್ನ ಸಂಜೀವ್ ಕುಮಾರ್ ಮತ್ತು ಅವರ ತಾಯಿ ಅವರು ಶನಿವಾರ 310 ಗ್ರಾಂ ತೂಕದ ನೆಕ್ಲೇಸ್ಗಳು, ಬಳೆಗಳು ಮತ್ತು ಕಿವಿಯೋಲೆಗಳು ಸೇರಿದಂತೆ ಸುಮಾರು ₹ 17 ಲಕ್ಷ ಮೌಲ್ಯದ ಒಡವೆಗಳನ್ನು ದೇವಸ್ಥಾನಕ್ಕೆ ದಾನ ಮಾಡಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಕೋವಿಡ್ ಕಾರಣದಿಂದ ಮುಚ್ಚಲಾಗಿದ್ದ ಮಹಾಕಾಳೇಶ್ವರ ದೇವಸ್ಥಾನವನ್ನು ಜೂನ್ 28ರಂದು ತೆರೆಯಲಾಗಿದ್ದು, ಒಟ್ಟು ₹ 23.03 ಕೋಟಿ ದೇಣಿಗೆ ಸಂಗ್ರಹವಾಗಿದೆ.