ಕರ್ನಾಟಕದ ಬೆಳಗಾವಿಯಲ್ಲಿ ಶನಿವಾರ ಆಯೋಜನೆಯಾಗಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದ ಅಮಿತ್ ಶಾ, ‘ಸುದೀರ್ಘ ಕಾಲದ ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ಕರ್ನಾಟಕಕ್ಕೆ ಅನುಕೂಲವಾಗುವ ರೀತಿಯಲ್ಲಿ ಬಗೆಹರಿಸಿದ್ದೇವೆ. ಇದರಿಂದ ಹಲವಾರು ಜಿಲ್ಲೆಗಳಿಗೆ ಪ್ರಯೋಜನವಾಗಲಿದೆ’ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನಿಲೇಶ್, ಈ ರೀತಿಯ ಬೆಳವಣಿಗೆಗಳು ನಡೆದಿಲ್ಲ. ಮಹದಾಯಿ ನದಿ ನೀರನ್ನು ಕರ್ನಾಟಕದ ಕಡೆ ತಿರುಗಿಸಲು ನಮ್ಮ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಒಪ್ಪಿಗೆ ನೀಡುವುದಿಲ್ಲ. ರಾಜ್ಯದ ನಿಯೋಗವು ಅಮಿತ್ ಶಾ ಅವರನ್ನು ಮುಂದಿನ ಬಾರಿ ಭೇಟಿ ಆದಾಗ ಈ ಹೇಳಿಕೆ ಕುರಿತು ಅವರನ್ನು ಪ್ರಶ್ನಿಸಲಿದೆ’ ಎಂದರು.