ಮುಂಬೈ: ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿಗಾಗಿ ಮಾರ್ಚ್ 14ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮಹಾರಾಷ್ಟ್ರ ಲೋಕಸೇವಾ ಆಯೋಗ (ಎಂಪಿಎಸ್ಸಿ) ಗುರುವಾರ ಮುಂದೂಡಿದೆ.
ರಾಜ್ಯದಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಎಂಪಿಎಸ್ಸಿ ಹೇಳಿದೆ.
ಎಂಪಿಎಸ್ಸಿಯ ಈ ನಿರ್ಧಾರಕ್ಕೆ ವಿರೋಧ ಪಕ್ಷ ಬಿಜೆಪಿಯಲ್ಲದೇ, ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಹಾಗೂ ಎನ್ಸಿಪಿಯಿಂದಲೂ ವಿರೋಧ ವ್ಯಕ್ತವಾಗಿದೆ.
ಈ ನಿರ್ಧಾರದ ಹಿಂದಿನ ಔಚಿತ್ಯ ಏನು ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಪೃಥ್ವಿರಾಜ್ ಚವಾಣ್ ಪ್ರಶ್ನಿಸಿದ್ದಾರೆ.
ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮದುವೆ ಕಾರ್ಯಕ್ರಮಗಳಿಗೆ, ಆರೋಗ್ಯ ಇಲಾಖೆ ಪರೀಕ್ಷೆ ನಡೆಸಲು ಸರ್ಕಾರ ಅನುಮತಿ ನೀಡುತ್ತದೆ. ಬಜೆಟ್ ಅಧಿವೇಶನವನ್ನೂ ನಡೆಸಿರುವಾಗ ಎಂಪಿಎಸ್ಸಿ ಪರೀಕ್ಷೆಗಳನ್ನು ಮಾತ್ರ ಮುಂದೂಡಿರುವುದು ತಪ್ಪು’ ಎಂದು ಹೇಳಿದರು.
‘ಈ ನಿರ್ಧಾರವನ್ನು ಕೂಡಲೇ ಕೈಬಿಡಬೇಕು. ಪರೀಕ್ಷೆಗಾಗಿ ಸಾಕಷ್ಡು ತಯಾರಿ ಮಾಡಿಕೊಂಡಿರುವ ಅಭ್ಯರ್ಥಿಗಳು ಅವಕಾಶ ವಂಚಿತರಾಗಬೇಕಾಗುತ್ತದೆ’ ಎಂದು ಬಿಜೆಪಿ ಮುಖಂಡ ದೇವೇಂದ್ರ ಫಡಣವೀಸ್ ಟ್ವೀಟ್ ಮಾಡಿದ್ದಾರೆ.
ಶರದ್ ಪವಾರ್ ಮೊಮ್ಮಗ ಹಾಗೂಎನ್ಸಿಪಿ ಶಾಸಕರೂ ಆಗಿರುವ ರೋಹಿತ್ ಪವಾರ್, ‘ಸುರಕ್ಷತಾ ಕ್ರಮಗಳೊಂದಿಗೆ ಪರೀಕ್ಷೆಗಳನ್ನು ನಡೆಸಬೇಕು’ ಎಂದು ಹೇಳಿದ್ದಾರೆ.
ನೇಮಕಾತಿಗೆ ಸಂಬಂಧಿಸಿದ ಈ ಪರೀಕ್ಷೆಗಳು ಕಳೆದ ವರ್ಷ ಏಪ್ರಿಲ್ನಲ್ಲಿ ನಡೆಯಬೇಕಿದ್ದವು. ಕೋವಿಡ್ ಪಿಡುಗು ಕಾರಣ ನೀಡಿದ್ದ ಪರಿಹಾರ ಮತ್ತು ಪುನರ್ವಸತಿ ಇಲಾಖೆ, ಈ ಪರೀಕ್ಷೆಗಳನ್ನು ಮುಂದೂಡಿತ್ತು.