ಮುಂಬೈ: ಬಾಳಾಸಾಹೇಬರಿಗೆ ದ್ರೋಹ ಬಗೆದವರು ಮುಗಿದು ಹೋಗಿದ್ದಾರೆ ಎಂದು ಸಂಜಯ್ ರಾವುತ್ ಭಾನುವಾರ ವಾಗ್ದಾಳಿ ನಡೆಸಿದ್ದಾರೆ.
ಶಿವಸೇನಾ ಬಂಡಾಯ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, ‘ಇನ್ನು ಮುಂದೆ ಯಾರನ್ನು ನಂಬಬೇಕೆಂದು ನಾವು ನಿರ್ಧರಿಸಬೇಕಿದೆ’ ಎಂದು ತಿಳಿಸಿದ್ದಾರೆ.
‘ಬಂಡಾಯ ಶಾಸಕರು ತಂಗಿರುವ ಸ್ಥಳದ ಫೋಟೋಗಳನ್ನು ನೋಡಿದಾಗ, ಅದು ಹೋಟೆಲ್ನಂತೆ ಕಾಣಿಸುತ್ತಿಲ್ಲ. ಅದು ಬಿಗ್ಬಾಸ್ ಮನೆಯಂತೆ ಗೋಚರಿಸುತ್ತಿದೆ. ಅಲ್ಲಿರುವವರು ಕುಡಿಯುತ್ತಿದ್ದಾರೆ. ತಿನ್ನುತ್ತಿದ್ದಾರೆ. ಆಟವಾಡುತ್ತಿದ್ದಾರೆ’ ಎಂದು ಹರಿಹಾಯ್ದಿದ್ದಾರೆ.
‘ಹೋಟೆಲ್ನಲ್ಲಿ ಉಳಿದುಕೊಂಡಿರುವ ಅರ್ಧದಷ್ಟು ಶಾಸಕರನ್ನು ಹೊರಹಾಕಲಾಗುತ್ತದೆ. ನೀವು(ಬಂಡಾಯ ಶಾಸಕರು) ಎಲ್ಲಿಯವರೆಗೆ ಗುವಾಹಟಿಯಲ್ಲಿ ಅಡಗಿಕೊಳ್ಳುತ್ತೀರಿ? ನೀವು ಚೌಪಾಟಿಗೆ ಹಿಂತಿರುಗಲೇಬೇಕು,’ ಎಂದು ಹೇಳಿಕೆ ನೀಡಿದ್ದಾರೆ.
‘ಅವರ(ಬಂಡಾಯ ಶಾಸಕರ) ದೇಹಗಳು ಮಾತ್ರ ಇಲ್ಲಿಗೆ ಬರುತ್ತವೆ. ಆತ್ಮವು ಸತ್ತಿರುತ್ತದೆ. ಆ 40 ಜನರು ಇಲ್ಲಿಗೆ(ಮುಂಬೈ) ಕಾಲಿಟ್ಟಾಗ, ಅವರು ಯಾರ ಹೃದಯದಲ್ಲಿಯೂ ಜೀವಂತವಾಗಿರುವುದಿಲ್ಲ. ಇಲ್ಲಿ ಹೊತ್ತಿಕೊಂಡಿರುವ ಬೆಂಕಿಯ ಎದುರು ತಾವು ಏನಾಗಬಹುದು ಎಂಬುದು ಅವರಿಗೆ ತಿಳಿದಿದೆ’ ಎಂದು ರಾವುತ್ ಹೇಳಿದ್ದಾರೆ.
‘ಇದು ಶಿವಸೇನೆ. ಇದಕ್ಕೆ ಒಬ್ಬನೇ ತಂದೆ. ನೀವು ತಂದೆಯನ್ನು ಕದಿಯಲು ಸಾಧ್ಯವಿಲ್ಲ. ಬಾಳಾಸಾಹೇಬರಿಗೆ ದ್ರೋಹ ಬಗೆದವರು ನಾಶವಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.