ನವದೆಹಲಿ: ಮೇಘಾಲಯದಲ್ಲಿ ಕಾಂಗ್ರೆಸ್ನ 12 ಶಾಸಕರು ಟಿಎಂಸಿಗೆ ಸೇರ್ಪಡೆಗೊಂಡಿರುವುದನ್ನು ‘ಪಿತೂರಿ‘ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
‘ಇದೊಂದು ಪಿತೂರಿಯಂತೆ ಕಾಣುತ್ತಿದೆ. ಈ ಕುರಿತು ಕಾಂಗ್ರೆಸ್ನ ಉನ್ನತ ನಾಯಕರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದಾಗಿ ಖರ್ಗೆ ತಿಳಿಸಿದ್ದಾರೆ‘ ಎಂದು ಎಎನ್ಐ ಟ್ವೀಟ್ ಮಾಡಿದೆ.
‘ಸೋನಿಯಾ ಹಾಗೂ ರಾಹುಲ್ ಸೇರಿದಂತೆ ಪಕ್ಷದ ನಾಯಕತ್ವವು ಮೇಘಾಲಯದ ಪಿತೂರಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ‘ ಎಂದೂ ಅವರು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಸೇರಿದಂತೆ ಮೇಘಾಲಯದ ಹದಿನೆಂಟು ಕಾಂಗ್ರೆಸ್ ಶಾಸಕರ ಪೈಕಿ ಹನ್ನೆರಡು ಮಂದಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ (ಟಿಎಂಸಿ) ಬುಧವಾರ ಸೇರ್ಪಡೆಗೊಂಡಿದ್ದಾರೆ.
ಹೊಸ ಶಾಸಕರ ಸೇರ್ಪಡೆಯಿಂದಾಗಿ ತೃಣಮೂಲ ಕಾಂಗ್ರೆಸ್ ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ.