ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯ ವಿಧಾನಸಭೆಗೆ ಪ್ರವೇಶಿಸುವುದು ರಾಜ್ಯದ ಕೋವಿಡ್ ಪರಿಸ್ಥಿತಿಯನ್ನು ಅವಲಂಬಿಸಿದೆ.
ಅವರು ರಾಜ್ಯದಲ್ಲಿ ಮೂರನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಒಂದು ತಿಂಗಳು ಕಳೆದಿದೆ. ಹುದ್ದೆಯಲ್ಲಿ ಮುಂದುವರಿಯಬೇಕಾದರೆ, ಉಳಿದಿರುವ ಐದು ತಿಂಗಳೊಳಗೆ ಅವರು ರಾಜ್ಯ ವಿಧಾನಸಭೆಗೆ ಆರಿಸಿಬರಬೇಕಿದೆ.
ಆದರೆ ಮುಖ್ಯಮಂತ್ರಿ ಸ್ಪರ್ಧಿಸುವ ನಿರೀಕ್ಷೆಯಿರುವ ರಾಜ್ಯದ ಭವಾನಿಪುರ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಸುವ ಮೊದಲು ಚುನಾವಣಾ ಆಯೋಗವು ರಾಜ್ಯದ ಕೋವಿಡ್ ಪರಿಸ್ಥಿತಿಯನ್ನು ಪರಿಶೀಲಿಸುವ ಸಾಧ್ಯತೆಯಿದೆ.
ಉಪಚುನಾವಣೆ ನಿಗದಿಪಡಿಸುವ ಮೊದಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಸಂಬಂಧಪಟ್ಟ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಚುನಾವಣಾ ಆಯೋಗವು ಪ್ರತಿಕ್ರಿಯೆ ಪಡೆದುಕೊಳ್ಳುವ ಸಾಧ್ಯತೆಯಿದೆ.
ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಭವಾನಿಪುರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ಟಿಎಂಸಿ ಪಕ್ಷದ ಸೋವನ್ದೇವ್ ಚಟ್ಟೋಪಾಧ್ಯಾಯ ಅವರು ರಾಜೀನಾಮೆ ನೀಡಿದ್ದು, ಮಮತಾ ಅವರ ಆಯ್ಕೆಗೆ ವೇದಿಕೆ ಒದಗಿಸಿದ್ದಾರೆ.