ಕೋಲ್ಕತ್ತ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪರಿಸ್ಥಿತಿ ಸೋತ ಆಟಗಾರನಂತಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ. ಟಿಎಂಸಿಯ ಧ್ಯೇಯವಾಕ್ಯವನ್ನು (ಆಟ ಶುರು/ಖೇಲಾ ಹೋಬೆ) ಉದ್ದೇಶಿಸಿ ಅವರು ವ್ಯಂಗ್ಯವಾಡಿದ್ದಾರೆ.
ಬರ್ಧಮಾನ್ ಜಿಲ್ಲೆಯ ಪುರ್ಬಾದ ಕಲ್ನಾದಲ್ಲಿ ರೋಡ್ ಶೋ ನಡೆಸಿ ಮಾತನಾಡಿದ ಅವರು, ಬಿಜೆಪಿ ಮತ್ತು ಚುನಾವಣಾ ಆಯೋಗದತ್ತ ಬೆರಳು ತೋರಿಸುತ್ತಿರುವ ಮಮತಾ ತಾನು ರಾಜ್ಯದ ಜನರಿಗೆ ಏನು ಮಾಡಿದ್ದೇನೆ ಎಂಬುದನ್ನು ಮರೆತಂತಿದೆ ಟೀಕಿಸಿದ್ದಾರೆ.
‘ಆಟದಲ್ಲಿ ಸೋತ ಆಟಗಾರನಂತಿದೆ ಮಮತಾ ಅವರ ಪರಿಸ್ಥಿತಿ. ಅವರು ರಾಜ್ಯದ ಜನರಿಗೆ ಅನೇಕ ವರ್ಷಗಳಿಂದ ಅನ್ಯಾಯವೆಸಗುತ್ತಾ ಬಂದಿದ್ದಾರೆ. ಆದರೆ ಅಧಿಕಾರ ನೀಡಿದರೆ ಬಿಜೆಪಿ ಅಭಿವೃದ್ಧಿಗೆ ಒತ್ತು ನೀಡಲಿದೆ. ಮಹಿಳೆಯರ ಮೇಲಿನ ದೌರ್ಜನ್ಯ ನಿಲ್ಲಿಸಲು ಮತ್ತು ಯುವಕರಿಗಾಗಿ ಉದ್ಯೋಗ ಸೃಷ್ಟಿಸಲು ಆದ್ಯತೆ ನೀಡಲಿದೆ’ ಎಂದು ನಡ್ಡಾ ಹೇಳಿದ್ದಾರೆ.