ನಾನೂರ್ (ಪ.ಬಂಗಾಳ): 'ಭಾರತದಲ್ಲಿನ ಶೇಕಡಾ 30ರಷ್ಟು ಮುಸ್ಲಿಂಮರು ಒಂದಾದರೆ ಇಲ್ಲಿ ನಾಲ್ಕು ಪಾಕಿಸ್ತಾನವನ್ನು ರಚಿಸಬಹುದು' ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಎಂದು ಹೇಳಿಕೊಳ್ಳುವ ಸ್ಥಳೀಯ ವ್ಯಕ್ತಿಯೊಬ್ಬನ ವಿಡಿಯೊ ಸಂದೇಶವು ವಿವಾದದಕಿಡಿ ಹೊತ್ತಿಸಿದೆ.
ಶೇಖ್ ಆಲಂ ಎನ್ನುವ ವ್ಯಕ್ತಿ ಟಿಎಂಸಿ ಬ್ಯಾನರ್ ಹಿಡಿದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಈ ಸಂಬಂಧ ಬಿಜೆಪಿಯಿಂದ ವ್ಯಾಪಕ ಟೀಕೆಗಳು ಬಂದ ಕಾರಣ ಸ್ಪಷ್ಟನೆ ನೀಡಿರುವ ಟಿಎಂಸಿ, ಶೇಖ್ ಆಲಂ ಪಕ್ಷದ ಕಾರ್ಯಕರ್ತನಲ್ಲ. ಆತನ ಹೇಳಿಕೆಯನ್ನು ಪಕ್ಷವು ಬೆಂಬಲಿಸುತ್ತಿಲ್ಲ ಎಂದಿದೆ.
ಬಿರ್ಭಮ್ನ ನಾನೂರ್ನಲ್ಲಿ ಈ 30 ಸೆಕೆಂಡುಗಳ ವಿಡಿಯೊ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
वाह ममता जी
— Kailash Vijayvargiya (@KailashOnline) March 25, 2021
वोट प्राप्त करने के लिए
क्या हो रहा है पश्चिम बंगाल में pic.twitter.com/nmhDpTgWj5
'ನಾವು ಅಲ್ಪಸಂಖ್ಯಾತರು ಜನಸಂಖ್ಯೆಯ 30 ಪ್ರತಿಶತ ಮತ್ತು ಉಳಿದವರು ಶೇ. 70ರಷ್ಟಿದ್ದಾರೆ. ಈ 70 ಪ್ರತಿಶತ ಬೆಂಬಲದಿಂದ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಾರೆ ಎಂದವರು ಭಾವಿಸುತ್ತಾರೆ. ಹಾಗೊಂದು ವೇಳೆ 30 ಪ್ರತಿಶತ ಅಲ್ಪಸಂಖ್ಯಾತರು ಒಂದಾದರೆ ನಾಲ್ಕು ಪಾಕಿಸ್ತಾನವನ್ನು ರಚಿಸಬಹುದು. ಹಾಗಾದ್ದಲ್ಲಿ ಭಾರತದ 70 ಪ್ರತಿಶತ ಜನರು ಎಲ್ಲಿ ಹೋಗುತ್ತಾರೆ' ಎಂದು ಪ್ರಶ್ನಿಸಿದ್ದಾರೆ.
ಈ ವಿಡಿಯೊ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ವರ್ಗಿಯಾ, ಇದು ಟಿಎಂಸಿಯ ನಿಜವಾದ ಬಣ್ಣವನ್ನು ಬಯಲು ಮಾಡುತ್ತದೆ ಎಂದು ಆರೋಪಿಸಿದ್ದಾರೆ.
ಈ ವಿಡಿಯೊ ಟಿಎಂಸಿಯ ನೈಜ ಬಣ್ಣವನ್ನು ಬಯಲು ಮಾಡುತ್ತಿದೆ. ಇದು ಅತ್ಯಂತ ಗಂಭೀರವಾದ ವಿಷಯವಾಗಿದ್ದು, ಭಾರತದಲ್ಲಿ ಇದ್ದುಕೊಂಡು ಯಾರಾದರೂ ದೇಶವನ್ನು ಪಾಕಿಸ್ತಾನವನ್ನಾಗಿ ಪರಿವರ್ತಿಸುವಂತೆ ಹೇಳಲು ಹೇಗೆ ಸಾಧ್ಯ? ಇದನ್ನು ನಡೆಯಲು ನಾವು ಎಂದಿಗೂ ಬಿಡುವುದಿಲ್ಲ. ರಾಜ್ಯದ ಮತ್ತು ದೇಶದ ಜನತೆಗೆ ಮಮತಾ ಬ್ಯಾನರ್ಜಿ ಉತ್ತರಿಸಬೇಕಿದೆ ಎಂದು ಕಿಡಿ ಕಾರಿದ್ದಾರೆ.
ಬಳಿಕ ಶೇಖ್ ಆಲಂ ಅವರನ್ನು ಸುದ್ದಿಗಾರರು ಸಂಪರ್ಕಿಸಿದಾಗ, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಮಜಾಯಿಸಿ ನೀಡಿದ್ದಾರೆ. ಭಾರತದಲ್ಲಿ ಪಾಕಿಸ್ತಾನರಚಿಸಬೇಕೆಂದು ನಾನು ಎಂದೂ ಹೇಳಿಲ್ಲ. ಮುಸ್ಲಿಂಮರಿಗೆ ಬೆದರಿಕೆ ಹಾಕಿದ್ದರೆ ಅದನ್ನು ಎದುರಿಸಲು ನಮಗೆ ಗೊತ್ತಿದೆ ಎಂಬ ಸಂದೇಶವನ್ನು ಹೇಳಲು ಬಯಸಿದ್ದೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.