ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತದಿಂದ ಅಂಗವಿಕಲನಾಗಿದ್ದ ಯುವಕನಿಗೆ ₹53 ಲಕ್ಷ ಪರಿಹಾರ

Last Updated 11 ನವೆಂಬರ್ 2020, 8:04 IST
ಅಕ್ಷರ ಗಾತ್ರ

ತಿರುವನಂತಪುರ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನಿಗೆ ₹52.7 ಲಕ್ಷ ಪರಿಹಾರಧನವನ್ನು ಕೇರಳದ ಮಲಪ್ಪುರಂ ಜಿಲ್ಲೆಯ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ (ಎಂಎಸಿಟಿ) ಘೋಷಿಸಿದೆ.

ಮಲಪ್ಪುರಂನ ಮನಿಯೂರ್‌ ಗ್ರಾಮದ ನಿವಾಸಿ ಬಿಜು(29) ಅವರಿಗೆ 2016 ರ ಜುಲೈ ತಿಂಗಳಲ್ಲಿ ಸರಕು ಸಾಗಣೆ ವಾಹನ ಡಿಕ್ಕಿ ಹೊಡೆದು ಸೊಂಟದ ಕೆಳಕಿನ ಭಾಗ ಪಾರ್ಶ್ವವಾಯುಗೆ ತುತ್ತಾಗಿ ದುರ್ಬಲಗೊಂಡಿದೆ. ಬಿಜು ವಿವಾಹವಾದ ಏಳು ತಿಂಗಳಿನ ಬಳಿಕ ಈ ಅಪಘಾತ ಸಂಭವಿಸಿತ್ತು.

ಫುಟ್‌ಬಾಲ್‌ ಆಟಗಾರರೂ ಆಗಿದ್ದ ಬಿಜು ಅವರು ಮೈಸೂರಿನಲ್ಲಿ ಕೆಲ ತಿಂಗಳು ಕೆಲಸ ಮಾಡಿದ್ದರು. ನಂತರ ವಿದೇಶಕ್ಕೆ ತೆರಳುವ ಕನಸು ಹೊತ್ತು ಕೆಲಸ ಬಿಟ್ಟಿದ್ದರು.

ಎಂಎಸಿಟಿಯು ಬಿಜು ಅವರಿಗೆ ಬಡ್ಡಿ ಸೇರಿ ₹68 ಲಕ್ಷ ಪರಿಹಾರಧನ ಘೋಷಿಸಿದೆ ಎಂದು ಬಿಜು ಪರ ವಕೀಲರಾದ ಬಿ.ಎಂ ಸಬೀನಾ ಮತ್ತು ಕೆ.ಪಿ ಅನಿಲ್‌ ಕುಮಾರ್‌ ಅವರು ತಿಳಿಸಿದರು.

‘ಬಿಜು ಅವರು ದೇಹದ ಶೇ.80 ರಷ್ಟು ಭಾಗ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸಾಮಾನ್ಯ ಕೆಲಸ ಮಾಡಲು ಬೇರೆ ವ್ಯಕ್ತಿಯ ಮೇಲೆ ಅವಲಂಬಿತರಾಗಿದ್ದಾರೆ. ಬಿಜು ಅವರ ವಯಸ್ಸು ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ಪರಿಹಾರಧನ ನೀಡಲಾಗಿದೆ. ಆದೇಶದ ಪೂರ್ತಿ ವಿವರ ಲಭ್ಯವಾದ ಬಳಿಕ ಪರಿಹಾರಧನ ಪಾವತಿಸುವ ವಿಧಾನ ತಿಳಿಯಲಿದೆ’ ಎಂದು ಅವರು ಹೇಳಿದರು.

‘ಪರಿಹಾರಧನ ಸ್ವಲ್ಪ ಸಮಾಧಾನವನ್ನು ನೀಡಿದೆ. ನಾನು ವೀಲ್‌ ಚೇರ್‌ ಮತ್ತು ಹಾಸಿಗೆಗಷ್ಟೇ ಸೀಮಿತವಾಗಿದ್ದೇನೆ. ಯಾವುದೇ ಕೆಲಸ ಮಾಡಲು ಆಗುತ್ತಿಲ್ಲ’ ಎಂದು ಬಿಜು ಹೇಳಿದರು. ಈಗಾಗಲೇ ಬಿಜು ಅವರ ಚಿಕಿತ್ಸೆಗೆ ₹4 ಲಕ್ಷ ಖರ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT