ಮಹಾರಾಷ್ಟ್ರ: ಪುಣೆ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ (ಚಸ್ಕಮಾನ್ ಮತ್ತು ಭಟ್ಘರ್ ಅಣೆಕಟ್ಟಿನ ಹಿನ್ನೀರು)ನಾಲ್ವರು ವಿದ್ಯಾರ್ಥಿಗಳು ಸೇರಿದಂತೆ 9 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಭೀಮಾ ನದಿಯ ಚಸ್ಕಮಾನ್ ಅಣೆಕಟ್ಟಿನ ಹಿನ್ನೀರಿನಲ್ಲಿ ನಾಲ್ವರು ವಿದ್ಯಾರ್ಥಿಗಳು ಗುರುವಾರ ಸಂಜೆ 4 ಗಂಟೆ ಸುಮಾರಿಗೆ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.
ಮತ್ತೊಂದೆಡೆ ವೆಲ್ವಂಡಿ ನದಿಯ ಭಟ್ಘರ್ ಅಣೆಕಟ್ಟಿನ ಹಿನ್ನೀರಿನಲ್ಲಿ ಐವರು ಮಹಿಳೆಯರು ಮುಳುಗಿ ಕೊನೆಯುಸಿರೆಳೆದಿದ್ದಾರೆ ಎಂದು ಪುಣೆ ಗ್ರಾಮಾಂತರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೃಷ್ಣಮೂರ್ತಿ ಫೌಂಡೇಶನ್ನ ಸಹ್ಯಾದ್ರಿ ಇಂಟರ್ನ್ಯಾಶನಲ್ ಸ್ಕೂಲ್ನ ವಿದ್ಯಾರ್ಥಿಗಳು ಗುಂಡಲವಾಡಿ ಪ್ರದೇಶಕ್ಕೆ ಈಜಾಡಲು ತೆರಳಿದ್ದರು. ಈಜು ಬರದೆ ನಾಲ್ವರು ನೀರಿನಲ್ಲಿ ಮುಳುಗಿದ್ದಾರೆ. ಇತರ ವಿದ್ಯಾರ್ಥಿಗಳು ಸ್ಥಳೀಯರು ರಕ್ಷಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Maharashtra | Four students drowned to death in Chaskaman Dam in Khed Tehsil of Pune district, police said. pic.twitter.com/7mog6OWHNX
ಮೃತ ವಿದ್ಯಾರ್ಥಿಗಳನ್ನು ರಿತಿನ್ ದಿಡ್ಡಿ, ನವ್ಯಾ ಭೋಸ್ಲೆ, ಪರೀಕ್ಷಿತ್ ಅಗರ್ವಾಲ್ ಮತ್ತು ತನಿಷ್ಕಾ ದೇಸಾಯಿ ಎಂದು ಗುರುತಿಸಲಾಗಿದೆ.
‘ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆ ಮುಗಿಸಿಕೊಂಡು ಗುಂಡಲವಾಡಿ ಪ್ರದೇಶಕ್ಕೆ ವಿಹಾರಕ್ಕೆ ಬಂದಿದ್ದು, ಈಜು ಬರದೆ ನಾಲ್ವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿದ್ದಾರೆ’ ಎಂದು ಖೇಡ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸತೀಶ್ಕುಮಾರ್ ಗುರವ್ ಹೇಳಿದ್ದಾರೆ.
ನರೇಗಾಂವ್ ಗ್ರಾಮಕ್ಕೆ ಸಂಬಂಧಿಕರೊಬ್ಬರ ಮದುವೆಗೆ ಬಂದಿದ್ದ ಐವರು ಮಹಿಳೆಯರು, ಭಟ್ಘರ್ ಅಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ ಬಹಿರ್ದೆಸೆಗೆ ತೆರಳಿದ್ದ ವೇಳೆ ಆಯತಪ್ಪಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪುಣೆ ಗ್ರಾಮಾಂತರ ಪೊಲೀಸ್ ಠಾಣೆ ಕಾನ್ಸ್ಟೆಬಲ್ ಅಭಿನವ್ ದೇಶಮುಖ್ ತಿಳಿಸಿದ್ದಾರೆ.