ನವಸಾರಿ, ಗುಜರಾತ್: 26/11 ಮುಂಬೈ ಭಯೋತ್ಪಾದನಾ ದಾಳಿಗೂ ಮುನ್ನ ಉಗ್ರರು ಐವರು ಮೀನುಗಾರರನ್ನು ಹತ್ಯೆಗೈದಿದ್ದರು. ಇದೀಗ ಮುಂಬೈ ದಾಳಿ ನಡೆದ 12 ವರ್ಷಗಳ ಬಳಿಕ ಮೂವರು ಮೀನುಗಾರರ ಕುಟುಂಬದವರಿಗೆ ಪರಿಹಾರಧನ ಲಭಿಸಿದೆ. ಗುಜರಾತ್ ಸರ್ಕಾರವು ತಲಾ ₹5 ಲಕ್ಷ ಪರಿಹಾರ ಧನ ವಿತರಿಸಿದೆ.
ಕ್ಯಾಪ್ಟನ್ ಅಮರ್ಸಿಂಗ್ ಸೋಲಂಕಿ ಸೇರಿದಂತೆ ಇಬ್ಬರು ಮೀನುಗಾರರ ಕುಟುಂಬಸ್ಥರಿಗೆ ವಿವಿಧ ಅಧಿಕಾರಿಗಳು ಈಗಾಗಲೇ ಪರಿಹಾರ ಧನ ನೀಡಿದ್ದರು. ಹಾಗಾಗಿ ಈಗ ಮೂವರು ಮೀನುಗಾರರ ಕುಟುಂಬಸ್ಥರಿಗೆ ಪರಿಹಾರ ನೀಡಲಾಗಿದೆ.
ಮೀನುಗಾರರಾದ ನಾತು ರಾಥೋಡ್, ಮುಖೇಶ್ ರಾಥೋಡ್ ಮತ್ತು ಬಲ್ವಂತ್ ತಾಂಡೇಲ್ ಗುಜರಾತ್ನ ಜಲಾಲ್ಪುರದ ವ್ಯಾನ್ಸಿ ಗ್ರಾಮದ ನಿವಾಸಿಗಳಾಗಿದ್ದರು.
ಈ ಮೂವರು ಮೀನುಗಾರರ ಕುಟುಂಬ ಸದಸ್ಯರಿಗೆ ನಿಗದಿತ ಠೇವಣಿ ರೂಪದಲ್ಲಿ ಕಳೆದ ವಾರ ತಲಾ ₹5 ಲಕ್ಷ ನೀಡಲಾಗಿದೆ. ಸಂಬಂಧಿಸಿದ ದಾಖಲೆಗಳನ್ನು ಕುಟುಂಸ್ಥರಿಗೆ ಶುಕ್ರವಾರ ಹಸ್ತಾಂತರ ಮಾಡಲಾಯಿತು. ಈ ಹಣವನ್ನು ಮೂರು ವರ್ಷಗಳ ಕಾಲ ನಿಗದಿತ ಠೇವಣಿಯಲ್ಲಿ ಇರಿಸಲಾಗಿದೆ ಎಂದು ನವಸಾರಿ ಜಿಲ್ಲೆಯ ವಿಪತ್ತು ನಿರ್ವಹಣಾ ಇಲಾಖೆಯ ಕಂದಾಯ ಅಧಿಕಾರಿ ರೋಶ್ನಿ ಪಟೇಲ್ ಅವರು ಹೇಳಿದರು.