ನವದೆಹಲಿ: ಮುಂಗಾರು ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ನಂತರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಕೊಠಡಿಯಲ್ಲಿ ವಿವಿಧ ಪಕ್ಷಗಳ ಮುಖಂಡರು ಬುಧವಾರ ಮುಖಾಮುಖಿಯಾದರು.
ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ, ಕಾಂಗ್ರೆಸ್, ಟಿಎಂಸಿ, ಅಕಾಲಿ ದಳ, ವೈಎಸ್ಆರ್ ಕಾಂಗ್ರೆಸ್, ಬಿಜೆಡಿ, ಶಿವಸೇನಾ ನಾಯಕರು ಸಭೆಯಲ್ಲಿ ಪಾಲ್ಗೊಂಡರು.
ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಓಂ ಬಿರ್ಲಾ,' ಪ್ರಜಾತಂತ್ರದಲ್ಲಿ ಚರ್ಚೆಗಳನ್ನು ಪ್ರೋತ್ಸಾಹಿಸಬೇಕಿದೆ. ಇದು ಜನರ ಸೇವೆಗೆ ಇರುವ ಏಕೈಕ ಮಾರ್ಗವಾಗಿದೆ' ಎಂದು ಒತ್ತಿ ಹೇಳಿದರು.
ಜುಲೈ 19 ರಂದು ಅಧಿವೇಶನ ಆರಂಭವಾದಾಗಿನಿಂದಲೂ ವಿರೋಧ ಪಕ್ಷಗಳು ಪೆಗಾಸಸ್ ಗೂಢಚರ್ಯೆ, ಕೃಷಿ ಕಾಯ್ದೆಗಳು ಮತ್ತು ಇತರ ವಿಷಯಗಳ ಬಗ್ಗೆ ಚರ್ಚೆ ನಡೆಸುವಂತೆ ಒತ್ತಾಯಿಸಿ ನಿರಂತರವಾಗಿ ಪ್ರತಿಭಟನೆ ನಡೆಸಿ, ಕಲಾಪಕ್ಕೆ ಅಡ್ಡಿಯುಂಟು ಮಾಡಿದ್ದವು. ಇದರಿಂದಾಗಿ, ಕಲಾಪವನ್ನು ಪದೇ ಪದೇ ಮುಂದೂಡಲಾಗುತ್ತಿತ್ತು.
#WATCH | Delhi: PM Modi, HM Amit Shah, Congress interim chief Sonia Gandhi, Leader of Congress in Lok Sabha Adhir Ranjan Chowdhury & other MPs including those from TMC, Shiromani Akali Dal, YSRCP, BJD and others met Lok Sabha Speaker Om Birla today.
ಇಡೀ ಅಧಿವೇಶನದಲ್ಲಿ ಪ್ರಶ್ನೋತ್ತರ ಸಮಯವನ್ನೂ ಪ್ರತಿಭಟನೆಗಳು ನುಂಗಿ ಹಾಕಿದವು. ವಿರೋಧ ಪಕ್ಷಗಳ ಗದ್ದಲದ ನಡುವೆಯೂ ರಾಜ್ಯಗಳಿಗೆ ತಮ್ಮದೇ ಪ್ರತ್ಯೇಕ ಇತರೆ ಹಿಂದುಳಿದ ವರ್ಗಗಳ ಪಟ್ಟಿಯನ್ನು ಸಿದ್ಧಪಡಿಸುವ ಅಧಿಕಾರವನ್ನು ಮರುಸ್ಥಾಪಿಸುವ ಸಂವಿಧಾನ ತಿದ್ದುಪಡಿ ಮಸೂದೆ ಸೇರಿದಂತೆ ಹಲವು ಮಸೂದೆಗಳನ್ನು ಅಂಗೀಕರಿಸಲಾಯಿತು.