ಕೋಲ್ಕತ್ತ: ಚಂಡಮಾರುತ ‘ಗುಲಾಬ್’ ರಾಜ್ಯದಲ್ಲಿ ಭಾರಿ ಮಳೆ ಮತ್ತು ಭೂಕುಸಿತಕ್ಕೆ ಕಾರಣವಾಗಿದ್ದು, ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರು ತಮ್ಮ ನವಜಾತ ಹೆಣ್ಣುಮಕ್ಕಳಿಗೆ ಗುಲಾಬ್ ಚಂಡಮಾರುತದ ಹೆಸರನ್ನು ಇಟ್ಟಿದ್ದಾರೆ.
ನೆರೆಯ ಆಂಧ್ರಪ್ರದೇಶದಲ್ಲಿ ಚಂಡಮಾರುತ ಅಪ್ಪಳಿಸುವ ವೇಳೆ ಒಡಿಶಾದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆಯ ದಾದಿಯರು ನೀಡಿದ ಸಲಹೆ ಮೇರೆಗೆ ಅವರು ತಮ್ಮ ಮಕ್ಕಳಿಗೆ 'ಗುಲಾಬ್' (ಗುಲಾಬಿ) ಎಂದು ನಾಮಕರಣ ಮಾಡಿದ್ದಾರೆ.
'ನನ್ನ ಮಗು ಈ ದಿನ ಜಗತ್ತಿಗೆ ಬಂದಿದ್ದರಿಂದ ನನಗೆ ಸಂತೋಷವಾಗಿದೆ, ಅದು ಎಲ್ಲರಿಗೂ ನೆನಪಿನಲ್ಲಿ ಉಳಿಯುತ್ತದೆ' ಎಂದು ಸಬರ್ ಸೋಮವಾರ ಹೇಳಿದ್ದಾರೆ.
ಸೊರಡಪಲ್ಲಿ ಗ್ರಾಮದ ನಿವಾಸಿಯಾದ ಸಬರ್, ಸುಮಂಡಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದರು. ಅಲ್ಲಿಗೆ ಬಂದ ಕೆಲವು ಸಿಬ್ಬಂದಿ ಮಗುವಿಗೆ 'ಗುಲಾಬ್' ಎಂದು ಹೆಸರಿಡಿ, ಇದರಿಂದ ಆಕೆಯ ಆಗಮನದ ಸಮಯವನ್ನು ಎಲ್ಲರೂ ನೆನಪಿಸಿಕೊಳ್ಳಬಹುದು ಎಂದು ಸೂಚಿಸಿದ್ದರು.
ಅಂಕುಲಿ ಪಂಚಾಯತ್ ವ್ಯಾಪ್ತಿಯ ಹಳ್ಳಿಯಲ್ಲಿ ವಾಸಿಸುತ್ತಿರುವ ರೈತ್, ಪತ್ರಾಪುರ ಸಮುದಾಯ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆಕೆ ತನ್ನ ಮಗುವಿಗೆ ಚಂಡಮಾರುತದ ಹೆಸರನ್ನು ಇಡಲು ಬಯಸಿದ್ದರು.
'ಅವರು ತನ್ನ ಮಗುವಿನ ಹೆಸರನ್ನು ಗುಲಾಬ್ ಎಂದು ಇಟ್ಟುಕೊಳ್ಳುವಂತೆ ನಾವು ಸೂಚಿಸಿದ್ದೆವು ಮತ್ತು ಅವರು ಅದಕ್ಕೆ ಒಪ್ಪಿಕೊಂಡರು' ಎಂದು ಆಸ್ಪತ್ರೆಯ ನರ್ಸ್ ಹೇಳಿದ್ದಾರೆ. ಚಂಡಮಾರುತದ ಹೆಸರನ್ನು 'ಗುಲಾಬ್' ಎಂದು ಪಾಕಿಸ್ತಾನ ನೀಡಿದೆ.
ಗಂಜಾಂನ ಮುಖ್ಯ ಜಿಲ್ಲಾ ವೈದ್ಯಕೀಯ ಅಧಿಕಾರಿ ಉಮಾ ಶಂಕರ್ ಮಿಶ್ರಾ ಮಾತನಾಡಿ, ಭಾನುವಾರ ಸಂಜೆ 6 ಗಂಟೆವರೆಗೆ ಆಡಳಿತವು 241 ಗರ್ಭಿಣಿಯರನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದೆ. ಚಂಡಮಾರುತವು ಕರಾವಳಿಯನ್ನು ಸಮೀಪಿಸುತ್ತಿರುವಾಗ ನಲವತ್ತೊಂದು ಮಹಿಳೆಯರು ತಮ್ಮ ಶಿಶುಗಳಿಗೆ ಜನ್ಮ ನೀಡಿದ್ದಾರೆ. ಎಲ್ಲಾ ನವಜಾತ ಶಿಶುಗಳು ಮತ್ತು ಅವರ ತಾಯಂದಿರು ಚೆನ್ನಾಗಿದ್ದಾರೆ ಎಂದು ಅವರು ಹೇಳಿದರು.