ಗುವಾಹಟಿ: ರಾಜ್ಯದ ಶಿಕ್ಷಣ ಸಚಿವ ಹಿಮಂತ ಬಿಸ್ವ ಶರ್ಮಾ ಅವರ ಕುಟುಂಬಕ್ಕೆ ಕಳಂಕ ತರಲು ಯತ್ನಿಸಿದ ಆರೋಪದ ಮೇಲೆ ನ್ಯೂಸ್ಪೋರ್ಟಲ್ವೊಂದರ ಪ್ರಧಾನ ಸಂಪಾದಕ ಮತ್ತು ಸುದ್ದಿ ಸಂಪಾದಕರನ್ನು ಬುಧವಾರ ಬಂಧಿಸಲಾಗಿದೆ.
ಈ ಸಂಬಂಧ ಸಚಿವರ ಪತ್ನಿ ದೂರು ದಾಖಲಿಸಿದ್ದಾರೆ. ಪ್ರತಿಬಿಂಬ ಲೈವ್.ಕಾಮ್ನ ಸುದ್ದಿ ಸಂಪಾದಕ ತೌಫಿಕುದ್ದೀನ್ ಅಹ್ಮದ್ ಮತ್ತು ಸುದ್ದಿ ಸಂಪಾದಕ ಇಕ್ಬಾಲ್ ಬಂಧಿತರು. ಸುದ್ದಿ ಪೋರ್ಟಲ್ನಲ್ಲಿ ಶರ್ಮಾ ಮತ್ತು ಅವರ ಮಗಳನ್ನು ಕೆಟ್ಟದಾಗಿ ಬಿಂಬಿಸಿರುವ ಆರೋಪ ಬಂಧಿತರ ಮೇಲಿದೆ.
ನ್ಯೂಸ್ ಪೋರ್ಟಲ್ ಕಚೇರಿಯ ಮೇಲೆ ದಾಳಿ ನಡೆಸಿರುವ ಪೊಲೀಸರು, ಕಂಪ್ಯೂಟರ್ ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
‘ಕೆಲವರ ಕೀಳುಮಟ್ಟದ ಮನಸ್ಥಿತಿಯನ್ನು ಇದು ಬಿಂಬಿಸುತ್ತದೆ. ನನ್ನ ವಿರುದ್ಧ ಆರೋಪ ಮಾಡುವ ಮೂಲಕ ಹಲವರು ನನ್ನನ್ನು ರಾಜಕೀಯದಿಂದ ಹೊರಹಾಕಲು ಪ್ರಯತ್ನಿಸಿದರು. ಆದರೆ, ಅದು ಅವರಿಂದ ಸಾಧ್ಯವಾಗದ ಕಾರಣ ಈ ರೀತಿಯ ಕೃತ್ಯ ಎಸಗಿದ್ದಾರೆ’ ಎಂದು ಶರ್ಮಾ ಹೇಳಿದ್ದಾರೆ.