ನವದೆಹಲಿ: ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದಿರುವ ನಾಗರಿಕರ ಹತ್ಯೆಯ ತನಿಖೆಯನ್ನು ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ವಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಭಯೋತ್ಪಾದನೆಯ ಆಯಾಮವನ್ನು ಮುಂದಿಟ್ಟುಕೊಂಡು ತನಿಖೆ ನಡೆಯುವ ನಿರೀಕ್ಷೆ ಇದೆ.
ಸೋಮವಾರ ನಡೆದ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರ ಸಮಾವೇಶದಲ್ಲಿಯೂ ಕಾಶ್ಮೀರ ವಿಚಾರ ಚರ್ಚೆಯಾಗಿದೆ. ಗೃಹ ಸಚಿವ ಅಮಿತ್ ಶಾ ಅವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ವಿಸ್ತೃತವಾಗಿ ಚರ್ಚೆ ನಡೆಸಿದ್ದಾರೆ ಎಂದೂ ಮೂಲಗಳು ಹೇಳಿವೆ.
ನಾಗರಿಕರ ಹತ್ಯೆಯಿಂದಾಗಿ ವಲಸಿಗರು ಕಾಶ್ಮೀರ ತೊರೆಯುತ್ತಿರುವುದಲ್ಲದೆ ಸ್ಥಳೀಯರೂ ಭೀತಿಗೆ ಒಳಗಾಗುವಂತಾಗಿದೆ. ಸರ್ಕಾರವು ಕೈಗೊಂಡ ಕ್ರಮಗಳಿಂದ ಕಾಶ್ಮೀರಕ್ಕೆ ಮರಳಲು ಬಯಸಿರುವ ಕಾಶ್ಮೀರಿ ಪಂಡಿತ ಸಮುದಾಯದವರಲ್ಲಿಯೂ ಆತಂಕಕ್ಕೆ ಕಾರಣವಾಗಿದೆ ಎಂದೂ ಮೂಲಗಳು ಹೇಳಿವೆ.
ಎನ್ಐಎಯ ಸ್ಥಳೀಯ ತಂಡವು ಈಗಾಗಲೇ ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ತನಿಖೆಗೆ ನೆರವಾಗುತ್ತಿದೆ. ಹತ್ಯೆಯ ಹಿಂದಿರುವ ಸಂಚುಕೋರರ ಬಗ್ಗೆ ಮಾಹಿತಿ ಕಲೆಹಾಕಲು ಯತ್ನಿಸುತ್ತಿದೆ ಎನ್ನಲಾಗಿದೆ.