ಪಣಜಿ: ‘ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಾಜಿ ಆಗುವ ಪ್ರಶ್ನೆಯೇ ಇಲ್ಲ’ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬುಧವಾರ ಹೇಳಿದರು.
ಬಜೆಟ್ ಮೇಲಿನ ಚರ್ಚೆ ವೇಳೆ ಈ ವಿಷಯ ಪ್ರಸ್ತಾಪಿಸಿದ ಅವರು, ‘ನ್ಯಾಯಯುತವಾಗಿ ರಾಜ್ಯಕ್ಕೆ ಸಿಗಬೇಕಾದ ನದಿ ನೀರು ಪಡೆಯಲು ಗೋವಾ ಹೋರಾಡುವುದು. ಈಗ ನಡೆಯುತ್ತಿರುವ ನ್ಯಾಯಾಂಗ ಹೋರಾಟದ ಮೂಲಕ ತನ್ನ ಪಾಲಿನ ನೀರಿನ ಮೇಲಿನ ಹಕ್ಕನ್ನು ಸ್ಥಾಪಿಸಲಿದೆ’ ಎಂದೂ ಹೇಳಿದರು.
‘ಮಹದಾಯಿ ವಿಷಯದಲ್ಲಿ ರಾಜ್ಯದ ಹಿತಾಸಕ್ತಿ ರಕ್ಷಣೆಗೆ ನನ್ನ ಸರ್ಕಾರ ಬದ್ಧವಾಗಿದೆ. ನೆರೆಯ ಕರ್ನಾಟಕ ನದಿ ನೀರನ್ನು ಕಾನೂನುಬಾಹಿರವಾಗಿ ತಿರುಗಿಸುವುದರ ವಿರುದ್ಧ ನನ್ನ ಅವಧಿಯಲ್ಲಿಯೇ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಾಯಿತು. ಇದರ ಫಲವಾಗಿಯೇ ಈಗ ಈ ವಿಷಯದ ಮೇಲುಸ್ತುವಾರಿಗೆ ಜಂಟಿ ಸಮಿತಿಯೊಂದನ್ನು ರಚಿಸಲಾಗಿದೆ’ ಎಂದು ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದರು.