ನವದೆಹಲಿ: ವಲಸೆ ಕಾರ್ಮಿಕರು, ರೈತರ ಆತ್ಮಹತ್ಯೆಗಳು, ಕೋವಿಡ್ -19 ಮತ್ತು ಆರ್ಥಿಕತೆಯ ಬಗ್ಗೆ ಮಾಹಿತಿಯ ಕೊರತೆಯಿರುವ ವಿಚಾರವಾಗಿ ಕಾಂಗ್ರೆಸ್ ನಾಯಕ ಶಶಿ ತರೂರ್, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಶಶಿ ತರೂರ್ ಅವರು ಮಂಗಳವಾರ ಟ್ವಿಟರ್ನಲ್ಲಿ ‘ದಿ ನೇಮ್ ಚೇಂಜರ್ಸ್’ (ಹೆಸರು ಬದಲಾವಣೆಕಾರರು) ಎಂಬ ತಲೆಬರಹವಿರುವ ಕಾರ್ಟೂನ್ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ನಾಯಕರು ಎನ್ಡಿಎ ಅಂದರೆ ‘ನೋ ಡೇಟಾ ಅವೈಲಬಲ್ (ಡೇಟಾ ಲಭ್ಯವಿಲ್ಲ)’ ಎಂದಿರುವ ಫಲಕಗಳನ್ನು ಹಿಡಿದಿದ್ದಾರೆ.
ವಲಸೆ ಕಾರ್ಮಿಕರ ಬಗ್ಗೆ ಮಾಹಿತಿ ಲಭ್ಯವಿಲ್ಲ, ರೈತರ ಆತ್ಮಹತ್ಯೆಗಳ ಯಾವುದೇ ಬಗ್ಗೆ ಮಾಹಿತಿ ಇಲ್ಲ, ಹಣಕಾಸಿನ ಉತ್ತೇಜನದ ಬಗ್ಗೆ ತಪ್ಪು ಮಾಹಿತಿ, ಕೋವಿಡ್-19 ಸಾವುಗಳ ಬಗ್ಗೆ ಸಂಶಯಾಸ್ಪದ ಮಾಹಿತಿ, ಜಿಡಿಪಿ ಬೆಳವಣಿಗೆಯ ಬಗ್ಗೆ ಅಸ್ಪಷ್ಟ ಮಾಹಿತಿ - ಈ ಸರ್ಕಾರವು ಎನ್ಡಿಎ ಎನ್ನುವ ಪದಕ್ಕೆ ಸಂಪೂರ್ಣ ಹೊಸ ಅರ್ಥವನ್ನು ನೀಡುತ್ತದೆ ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.
No #data on migrant workers, no data on farmer suicides, wrong data on fiscal stimulus, dubious data on #Covid deaths, cloudy data on GDP growth — this Government gives a whole new meaning to the term #NDA! pic.twitter.com/SDl0z4Hima
— Shashi Tharoor (@ShashiTharoor) September 22, 2020
ಕೃಷಿ ಕ್ಷೇತ್ರದಲ್ಲಿ ರೈತರ ಆತ್ಮಹತ್ಯೆಗೆ ಕಾರಣಗಳ ಕುರಿತವರದಿಯನ್ನು 'ಒಪ್ಪಲಾಗದು' ಮತ್ತು ಅದನ್ನು ಪ್ರಕಟಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿದ ಒಂದು ದಿನದ ನಂತರ ಶಶಿ ತರೂರ್ ಅವರು ಟ್ವೀಟ್ ಮೂಲಕ ಸರ್ಕಾರವನ್ನು ಟೀಕಿಸಿದ್ದಾರೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಮಾಹಿತಿಯಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಸೋಮವಾರ, ಅನೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇತರ ವೃತ್ತಿಗಳಲ್ಲಿನ ಆತ್ಮಹತ್ಯೆಗಳನ್ನು ವರದಿ ಮಾಡಿದ್ದರೂ ಸಹ ರೈತರು, ಕೃಷಿಕರು ಮತ್ತು ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಶೂನ್ಯ ವರದಿಯನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.
'ಈ ಮಿತಿಯಿಂದಾಗಿ, ಕೃಷಿ ಕ್ಷೇತ್ರದಲ್ಲಿ ಆತ್ಮಹತ್ಯೆಗೆ ಕಾರಣಗಳ ಕುರಿತ ಎನ್ಸಿಆರ್ಬಿ ವರದಿಯನ್ನು ಒಪ್ಪಲು ಸಾಧ್ಯವಿಲ್ಲ ಮತ್ತು ಪ್ರತ್ಯೇಕವಾಗಿ ಪ್ರಕಟಗೊಂಡಿಲ್ಲ' ಎಂದು ಅವರು ಲಿಖಿತ ಉತ್ತರದ ಮೂಲಕ ತಿಳಿಸಿದ್ದಾರೆ.
ಇದಕ್ಕೂ ಮೊದಲು, ಕೊರೊನಾ ವೈರಸ್ ಹರಡುವುದನ್ನು ತಡೆಯಲು ರಾಷ್ಟ್ರವ್ಯಾಪಿ ವಿಧಿಸಲಾದ ಲಾಕ್ಡೌನ್ ವೇಳೆಯಲ್ಲಿ ಮೃತಪಟ್ಟ ವಲಸೆ ಕಾರ್ಮಿಕರ ಅಂಕಿ-ಅಂಶಗಳಬಗ್ಗೆಯೂ ಯಾವುದೇ ಮಾಹಿತಿಯಿಲ್ಲ ಎಂದು ಈ ಹಿಂದೆ ಸರ್ಕಾರ ಸಂಸತ್ತಿನಲ್ಲಿ ಒಪ್ಪಿಕೊಂಡಿತ್ತು. ಇದಾದ ಬಳಿಕ ಕಾಂಗ್ರೆಸ್ ಮೋದಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.