ನಾಗರಿಕ ಸೇವಾ ಪರೀಕ್ಷೆಯಿಂದ ಸಿಎಸ್ಎಟಿ ಕೈಬಿಡುವ ಯೋಚನೆ ಇಲ್ಲ: ಕೇಂದ್ರ ಸ್ಪಷ್ಟನೆ

ನವದೆಹಲಿ: ‘ನಾಗರಿಕ ಸೇವಾ ಪರೀಕ್ಷೆಯಿಂದ ಸಿವಿಲ್ ಸರ್ವಿಸಸ್ ಅಪ್ಟಿಟ್ಯೂಡ್ ಟೆಸ್ಟ್ (ಸಿಎಸ್ಎಟಿ) ಕೈಬಿಡುವ ಯೋಚನೆ ಇಲ್ಲ’ ಎಂದು ಕೇಂದ್ರ ಸರ್ಕಾರವು ಗುರುವಾರ ಸ್ಪಷ್ಟಪಡಿಸಿದೆ.
ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್ಸಿ) ಐಎಎಸ್, ಐಎಫ್ಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ಆಯ್ಕೆಮಾಡುವ ಸಲುವಾಗಿ ನಾಗರಿಕ ಸೇವಾ ಪರೀಕ್ಷೆ ಆಯೋಜಿಸುತ್ತದೆ. ಇದು ಮೂರು ಹಂತಗಳಲ್ಲಿ ನಡೆಯುತ್ತದೆ. ಸಿಎಸ್ಎಟಿ, ಪೂರ್ವಭಾವಿ ಪರೀಕ್ಷೆಯ ಭಾಗವಾಗಿದೆ.
‘ಸಿಎಸ್ಎಟಿ ಕೈಬಿಡುವ ಯೋಜನೆ ಇದೆಯೇ’ ಎಂದು ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆಯ ರಾಜ್ಯ ಸಚಿವ ಜಿತೇಂದರ್ ಸಿಂಗ್ ಅವರು ‘ಇಲ್ಲ’ ಎಂದು ಲಿಖಿತ ಉತ್ತರ ನೀಡಿದ್ದಾರೆ.
ಸರ್ಕಾರವು ಯುಪಿಎಸ್ಸಿ ಪರೀಕ್ಷೆಯ ಮಾದರಿಯನ್ನು ಬದಲಿಸಲು ಮುಂದಾಗಲಿದೆಯೇ ಎಂಬ ಪ್ರಶ್ನೆಗೆ ಪ್ರತ್ಯೇಕವಾಗಿ ಉತ್ತರಿಸಿದ ಜಿತೇಂದರ್ ‘ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು (ಎನ್ಟಿಎ) ಉನ್ನತ ಶಿಕ್ಷಣ ಸಂಸ್ಥೆಗಳ ದಾಖಲಾತಿ/ಫೆಲೋಶಿಪ್ಗೆ ಪ್ರವೇಶ ಪರೀಕ್ಷೆ ನಡೆಸುತ್ತದೆ. ಯುಪಿಎಸ್ಸಿಯಲ್ಲಿ ಈಗಿರುವ ಸಂದರ್ಶನ ಹಂತದ ಬದಲು ಮಾನಸಿಕ ಪರೀಕ್ಷೆಯನ್ನು ಸೇರ್ಪಡೆ ಮಾಡುವ ಆಲೋಚನೆ ಇಲ್ಲ ಎಂದು ಎನ್ಟಿಎ ಮಾಹಿತಿ ನೀಡಿದೆ’ ಎಂದರು.
‘ಕೋವಿಡ್–19 ಬಿಕ್ಕಟ್ಟಿನಿಂದಾಗಿ 2020ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಗೆ ನಿಗದಿಯಂತೆ ಏಪ್ರಿಲ್ನಲ್ಲಿ ಅಧಿಸೂಚನೆ ಹೊರಡಿಸಲು ಆಗಲಿಲ್ಲ. ಕೋವಿಡ್ ಕಾರಣದಿಂದ ಕಂಬೈನ್ಡ್ ಗ್ರ್ಯಾಜುಯೇಟ್ ಲೆವಲ್ ಎಕ್ಸಾಮಿನೇಷನ್ –2018ರ ಟಯರ್–3 ಪರೀಕ್ಷಾ ಫಲಿತಾಂಶವೂ ವಿಳಂಬವಾಗಿದೆ. ಫಲಿತಾಂಶವನ್ನು ಆದಷ್ಟು ಬೇಗನೆ ಪ್ರಕಟಿಸಲು ಪ್ರಯತ್ನಿಸುತ್ತೇವೆ’ ಎಂದೂ ಅವರು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.