ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃದು ಹಿಂದುತ್ವದತ್ತ ಹೊರಳಿದ ಎಎಪಿ; ದೆಹಲಿ ನಿವಾಸಿಗಳಿಗೆ ರಾಮಮಂದಿರದ ಉಚಿತ ದರ್ಶನ

ದೆಹಲಿ ನಿವಾಸಿಗಳಿಗೆ ರಾಮಮಂದಿರದ ಉಚಿತ ದರ್ಶನ
Last Updated 26 ಅಕ್ಟೋಬರ್ 2021, 15:21 IST
ಅಕ್ಷರ ಗಾತ್ರ

ಲಖನೌ: ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೂ ಐದು ತಿಂಗಳು ಬಾಕಿ ಇರುವಾಗಲೇ ತನ್ನ ಅಸ್ತಿತ್ವಕ್ಕಾಗಿ ಶ್ರಮಿಸುತ್ತಿರುವ ಆಮ್ ಆದ್ಮಿ ಪಕ್ಷವು (ಎಎಪಿ), ಬಿಜೆಪಿಯನ್ನು ಎದುರಿಸಲು ಈಗ ಮೃದು ಹಿಂದುತ್ವದತ್ತ ಹೊರಳಿದೆ. ಅದರ ಭಾಗವಾಗಿ ದೆಹಲಿ ನಿವಾಸಿಗಳಿಗೆ ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಉಚಿತ ದರ್ಶನದ ಭರವಸೆ ನೀಡಿದೆ.

ಅಯೋಧ್ಯೆಯಲ್ಲಿನ ತಾತ್ಕಾಲಿಕ ಶ್ರೀರಾಮ ಮಂದಿರಕ್ಕೆ ಮಂಗಳವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರದೊಂದಿಗೆ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ನಿವಾಸಿಗಳಿಗೆ ಉಚಿತ ದರ್ಶನದ ಘೋಷಣೆಯನ್ನು ಮಾಡಿದ್ದಾರೆ.

ವೈಷ್ಣೋದೇವಿ, ಶಿರಡಿ, ಹರಿದ್ವಾರ, ಋಷಿಕೇಶ ಮತ್ತು ದೇಶದ ಇತರ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವುದನ್ನು ಒಳಗೊಂಡಂತೆ ದೆಹಲಿ ಸರ್ಕಾರವು ರಾಜ್ಯದ ಜನರಿಗೆ ಉಚಿತ ತೀರ್ಥಯಾತ್ರೆಗೆ ಅನುಕೂಲ ಕಲ್ಪಿಸಿದೆ. ದೆಹಲಿ ಸರ್ಕಾರವೇ ಎಲ್ಲಾ ವೆಚ್ಚಗಳನ್ನು ಭರಿಸುತ್ತದೆ ಮತ್ತು ಯಾತ್ರಿಕರು ಏನನ್ನೂ ಪಾವತಿಸಬೇಕಾಗಿಲ್ಲ. ತೀರ್ಥಯಾತ್ರೆ ಪಟ್ಟಿಯಲ್ಲಿ ಶ್ರೀರಾಮ ಮಂದಿರದ ಭೇಟಿಯನ್ನೂ ಸೇರಿಸಲಾಗುವುದು ಎಂದು ಅವರು ಹೇಳಿದರು.

‘ಆಕಸ್ಮಿಕವಾಗಿ ಹಿಂದೂ’ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡಲು ತಪ್ಪಿಸಿಕೊಂಡ ಕೇಜ್ರಿವಾಲ್ ಅವರು, ಹಿಂದೂ ಅನ್ನುವುದು ನನಗೆ ಮುಖ್ಯವಲ್ಲ. ಧಾರ್ಮಿಕ ಸ್ಥಳಗಳು ಎಲ್ಲರಿಗೂ ತೆರೆದಿರುತ್ತವೆ. ಅಲ್ಲಿಗೆ ಯಾರೂ ಬೇಕಾದರೂ ಹೋಗಬಹುದು ಎಂದರು. ಉತ್ತರಪ್ರದೇಶ ಚುನಾವಣೆಯಲ್ಲಿ ಎಎಪಿ ಸ್ಥಾನದ ಕುರಿತು ಕೇಳಲಾದ ಪ್ರಶ್ನೆಗೂ ಅವರು ಉತ್ತರ ನೀಡಲಿಲ್ಲ.

ಎಎಪಿ ರಾಜ್ಯದ ಎಲ್ಲಾ 403 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದು, ಈಗಾಗಲೇ ತನ್ನ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದೆ.

ಕೇಜ್ರಿವಾಲ್‌ಗೆ ಜಾಮೀನು: ಮಾದರಿ ನೀತಿಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ 2014ರಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಸೋಮವಾರ ಅಯೋಧ್ಯೆಗೆ ತೆರಳಿ, ಸುಲ್ತಾನ್‌ಪುರದ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಈ ಪ್ರಕರಣದಲ್ಲಿ ನ್ಯಾಯಾಲಯವು ಅವರಿಗೆ ಜಾಮೀನು ನೀಡಿತು. ಆದರೆ, ತಮ್ಮ ವಿರುದ್ಧದ ಆರೋಪಗಳನ್ನು ರದ್ದುಗೊಳಿಸುವಂತೆ ಕೋರಿ ಕೇಜ್ರಿವಾಲ್ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT